Wednesday 25 September 2013

`ಈಜಿಪ್ಟ್' ಪ್ರಜಾಪ್ರಭುತ್ವಕ್ಕೆ ಜಯವಾಗಲಿ



ಈಜಿಪ್ಟ್ ಒಂದು ಪುರಾತನ ದೇಶ. ಹಲವಾರು ನಾಗರಿಕತೆಗಳು, ವೈವಿಧ್ಯಮಯ ಸಂಸ್ಕøತಿಗಳು ಹಾಗೂ ವಿವಿಧ ರೀತಿಯ ಘಟನೆಗಳಿಗೆ ಸಾಕ್ಷಿಯಾದ ದೇಶ. ಈ ದೇಶಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಈ ಪುಣ್ಯಭೂಮಿಗೆ ಹಲವು ಪ್ರವಾದಿಗಳು ಬಂದು ಹೋಗಿದ್ದಾರೆ. ಹಿಂದಿನಿಂದಲೂ ಸುದ್ದಿಯಲ್ಲಿರುವ ಈ ದೇಶವು ಇಂದೂ ಕೂಡಾ ಜಗತ್ತಿನ ಗಮನ ಸೆಳೆಯುತ್ತಿದೆ. ಹಲವಾರು ರಾಜರುಗಳ ದಬ್ಬಾಳಿಕೆಗೂ ಉತ್ತಮ ಆಡಳಿತಗಾರರ ಸಮೃದ್ಧ ಆಳ್ವಿಕೆಗೂ ಈ ದೇಶವು ಭೂಮಿಕೆಯಾಗಿದೆ. ಇಲ್ಲಿನ ಜನತೆಯ ಸ್ಥಿತಿಯೂ ಭಿನ್ನವಲ್ಲ.
ಆದರೆ ಈ ದಬ್ಬಾಳಿಕೆಗಳಾವುದೂ ಹೆಚ್ಚು ಕಾಲ ಬಾಳಿಕೆ ಬರುತ್ತಿರಲಿಲ್ಲ. ವ್ಯಕ್ತಿಗಳ ರೂಪದಲ್ಲೂ ಸಂಘಟನೆಗಳ ರೂಪದಲ್ಲೂ ಅಲ್ಲಿನ ಜನತೆಗೆ ನ್ಯಾಯ ಒದಗಿಸಲು ಒಳಿತಿನ ಶಕ್ತಿಗಳು ಉದ್ಭವಗೊಳ್ಳುತ್ತಿದ್ದವು. ಅಂದು ಫಿರ್‍ಔನನ ದಬ್ಬಾಳಿಕೆಗೆ ಒಳಗಾಗಿದ್ದ ಜನತೆಯನ್ನು ರಕ್ಷಿಸಲು ಮೂಸಾ(ಅ) ಆತನ ಅರಮನೆಯಲ್ಲೇ ಬೆಳೆದು ಬಂದಿದ್ದರು. ಫಿರ್‍ಔನನ ಕೆಡುಕಿಗೂ ಪ್ರವಾದಿ ಮೂಸಾರ(ಅ) ಒಳಿತಿಗೂ ಮಧ್ಯೆ ನಡೆದ ನಿರಂತರ ಸಂಘರ್ಷದಲ್ಲಿ ಕೊನೆಗೆ ಮೇಲುಗೈ ಸಾಧಿಸಿದ್ದು ಒಳಿತೇ ವಿನಃ ಕೆಡುಕಲ್ಲ. ಇದರ ಫಲವಾಗಿ ಕೆಡುಕಿನ ಶಕ್ತಿಗಳಿಗೆ ನಾಶ ಖಚಿತ ಎಂದು ಸಾರಿ ಹೇಳಲು ಫಿರ್‍ಔನನ ಜಡ ಶರೀರವು ಇಂದೂ ಈಜಿಪ್ಟಿನ ಮ್ಯೂಝಿಯಮ್‍ನಲ್ಲಿದೆ. ಎಲ್ಲಾ ದುರಾಡಳಿತಗಾರರಿಗೂ "ಮುಂದೊಂದು ದಿನ ನಿಮಗೆ ನಾಶ ಖಚಿತ" ಎಂಬ ಮೆಸೇಜ್ ರವಾನಿಸುತ್ತಿದೆ.
ಹಿಂದೆ ನಡೆದ ಫಿರ್‍ಔನನ ದಬ್ಬಾಳಿಕೆಯು ಇಂದು ಆಧುನಿಕ ರೂಪದಲ್ಲಿ ಈಜಿಪ್ಟಿನಲ್ಲಿ ನಡೆಯುತ್ತಿದೆ. ಈಗ ಮುಸ್ಲಿಮ್ ಬ್ರದರ್‍ಹುಡ್ (ಇಖ್ವಾನುಲ್ ಮುಸ್ಲಿಮೂನ್) ಅಲ್ಲಿನ ಜನತೆಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸುತ್ತಿದೆ. ಜನತೆಯ ಕ್ಷೇಮಕ್ಕಾಗಿ ಜೀವವನ್ನೂ ಸಂಪತ್ತನ್ನೂ ತ್ಯಾಗ ಮಾಡುತ್ತಿದೆ. ಮುಸ್ಲಿಮ್ ಬ್ರದರ್‍ಹುಡ್ ಸಂಘಟನೆಯು ಹುಟ್ಟಿಕೊಂಡದ್ದು 1928ರಲ್ಲಾಗಿತ್ತು. ಅದು ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ರಂಗಗಳಲ್ಲಿ ತನ್ನ ಕೈಲಾದ ಕೆಲಸ ನಿರ್ವಹಿಸುತ್ತಿದೆ. ಅಧ್ಯಾಪಕರಾದ ಹಸನುಲ್ ಬನ್ನ ಇದರ ಸ್ಥಾಪಕ ನೇತಾರರಾಗಿದ್ದಾರೆ. ಬೆರಳೆಣಿಕೆಯ ಮಂದಿಯೊಂದಿಗೆ  ಆರಂಭಗೊಂಡ ಈ ಸಂಘಟನೆಯು ಇಂದು ಬೃಹತ್ ಸದಸ್ಯ ಕೂಟವನ್ನು ಹೊಂದಿದೆ. ಈ ಸಂಘಟನೆಯನ್ನು ನಾಮಾವೇಶಗೊಳಿಸುವ ಹಲವಾರು ಪ್ರಯತ್ನಗಳು ಸ್ವೇಚ್ಛಾದಿಪತಿಗಳಾದ ಹಲವಾರು ಆಡಳಿತಗಾರರಿಂದ ನಡೆದಿದೆ. ಆದರೆ ಒಳಿತಿನ ಬೆಳವಣಿಗೆಯ ಚಲನೆಯನ್ನು ನಿಧಾನಗೊಳಿಸಬಹುದೇ ವಿನಃ ಅದನ್ನು ನಾಶಪಡಿಸಲು ಸಾಧ್ಯವಿಲ್ಲ ಎಂಬುದನ್ನು ಆ ದುಷ್ಟ ಶಕ್ತಿಗಳು ಅರಿತಿರಲಿಲ್ಲ. ಆ ಸಂಘಟನೆಯ ಹಲವಾರು ನಾಯಕರು ದುಷ್ಟರ ಕುತಂತ್ರಗಳಿಗೂ, ಆಕ್ರಮಣಗಳಿಗೂ ಬಲಿಯಾದರು. ಓರ್ವ ನೇತಾರನ ಅಂತ್ಯವಾದರೆ ಇನ್ನೋರ್ವ ಸಮರ್ಥ ನಾಯಕನ ಉದಯವು ಈ ಸಂಘಟನೆಯ ವಿಶೇಷತೆಯಾಗಿದೆ. ಈ ಸಂಘಟನೆಯು ಹಲವಾರು ಬಾರಿ ನಿಷೇಧಕ್ಕೆ ಒಳಗಾಗಿದೆ. ಏನೇ ಮಾಡಿದರೂ ಬಗ್ಗದ ಈ ಸಂಘಟನೆಯು ದುಷ್ಟ ಆಡಳಿತಗಾರರಿಗೆ ಇಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇಂದು ಈಜಿಪ್ಟಿನಲ್ಲಿ ಶೇಕಡಾ 51ರಷ್ಟು ಮತ ಪಡೆದವರು ಜೈಲಿನಲ್ಲೂ 1.5 ಶೇಕಡಾ ಮತ ಪಡೆದವರು ಅಧಿಕಾರದಲ್ಲಿ ಮೆರೆಯುವ ಆಘಾತಕಾರಿ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜನರು ಸ್ವ ಇಚ್ಛೆಯೊಂದಿಗೆ ಆರಿಸಿದ ಬ್ರದರ್‍ಹುಡ್‍ನ ಮುಹಮ್ಮದ್ ಮುರ್ಸಿಯವರನ್ನು ಸೇನೆಯು ಬಲವಂತದಿಂದ ಕೆಳಗಿಳಿಸಿ ಅಧಿಕಾರಕ್ಕೇರಿದೆ. ಈ ಕೃತ್ಯವು ಕೇವಲ ಸೇನೆಯಿಂದ ಮಾತ್ರ ನಡೆದದ್ದಲ್ಲ. ಬದಲಾಗಿ ಹೊರಗಿನ ಶಕ್ತಿಗಳು ಇದಕ್ಕಾಗಿ ಕೆಲಸ ಮಾಡಿದೆ. ಮುರ್ಸಿಯವರ ಸರಕಾರವನ್ನು ಬುಡಮೇಲು ಗೊಳಿಸಿದಾಗ ಅಮೇರಿಕಾವು "ಈ ಕೃತ್ಯದ ಹಿಂದೆ ನಮ್ಮ ಕೈವಾಡವಿಲ್ಲ" ಎಂದು ಹೇಳಿಕೆ ನೀಡಿತ್ತು. ಆದರೆ ಕೆಲ ದಿನಗಳ ನಂತರ ಅಲ್ಲಿ ಸೇನೆಗೆ ಅಮೇರಿಕಾವು ರಹಸ್ಯವಾದ ಆರ್ಥಿಕ ನೆರವು ನೀಡಿದ ವಿಷಯವು ಬಹಿರಂಗಗೊಂಡು ಅಮೇರಿಕಾವು ನಾಚಿಕೆಗೀಡಾಯಿತು.
ಈ ಸೇನಾ ಬುಡಮೇಲು ಕೃತ್ಯದ ವಿರುದ್ಧ ಆರಂಭದಲ್ಲಿ ಧ್ವನಿ ಎತ್ತಿದ ಇರಾನ್ ಬಳಿಕ ಮೌನ ತಾಳಿತು. ಹಲವು ಮುಸ್ಲಿಮ್ ರಾಷ್ಟ್ರಗಳ ಈ ಬೆಳವಣಿಗೆಯನ್ನು ಖಂಡಿಸಿದರೂ ಸೌದಿ ಹಾಗೂ ಯು.ಎ.ಇ. ಬಹಿರಂಗವಾಗಿ ಸೇನಾಡಳಿತವನ್ನು ಬೆಂಬಲಿಸಿದವು. ಸೌದಿಯ ಈ ವರ್ತನೆಗೆ ಕಾರಣವೂ ಇತ್ತು. ಸೌದಿಯಲ್ಲಿ ರಾಜರ ಆಳ್ವಿಕೆ ನಡೆಯುತ್ತಿದೆ. ಇದು ಶತಮಾನಗಳಿಂದ ಮುಂದುವರಿಯುತ್ತಾ ಬಂದಿದೆ. ಈಜಿಪ್ಟಿನ ಪ್ರಜಾಪ್ರಭುತ್ವದ ಆಳ್ವಿಕೆಯನ್ನು ಕೊನೆಗಾಣಿಸದಿದ್ದರೆ ನಮ್ಮ ಗದ್ದುಗೆಗೆ ಕುತ್ತು ಬೀಳುವುದು ಇಲ್ಲಿನ ಜನತೆ ದಂಗೆ ಎದ್ದಾರು ಎಂದು ಕಳವಳಗೊಂಡಿತು. ಆದ್ದರಿಂದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಲು ಸೇನೆಗೆ ನೆರವು ನೀಡಿತು.
ಆದರೆ ಈಗ ಸೌದಿಯಲ್ಲೂ ದಂಗೆಯ ವಾಸನೆಯು ಬೀಸ ತೊಡಗಿದೆ. ಇದರಿಂದ ಸೌದಿಯು ಭಯಭೀತಗೊಂಡಿದೆ. ಆರಂಭದ ಸರಕಾರದ ವಿರುದ್ಧ ಸೆಟೆದು ನಿಂತಿರುವುದು ಸಾಮಾನ್ಯ ಮಂದಿಯಾಗಿದ್ದರೆ ಸೌದಿಯು ಅದನ್ನು ಯಾವಾಗಲೇ ದಮನಿಸಿರುತ್ತಿತ್ತು. ಖಾಲಿದ್ ಬಿನ್ ಫರ್ಹಾನ್ ಎಂಬ ರಾಜ ಕುಮಾರನೇ ಸರಕಾರದ ನೀತಿಗಳ ವಿರುದ್ಧ ಸೆಟೆದು ನಿಂತದ್ದು ಸೌದಿಗೆ ತಲೆನೋವಾಗಿ ಪರಿಣಮಿಸಿದೆ. ಸೌದಿಯ ಜನತೆಯು ಜಗತ್ತಿನ ಬೆಳವಣಿಗೆಯನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಂತಹ ಬದಲಾವಣೆಗಳು ನಮ್ಮಲ್ಲೂ ಬರಬೇಕು ಎಂದು ಸೌದಿಯ ಜನತೆಯು ಯೋಚಿಸಿದರೆ ಮತ್ತೆ ಅಲ್ಲಿ ರಾಜರ ಆಳ್ವಿಕೆಗೆ ಉಳಿಗಾಲವಿರಲಿಕ್ಕಿಲ್ಲ. ಆದ್ದರಿಂದಲೇ ಸೌದಿ ಸರಕಾರವು ವಿದೇಶಿಗಳನ್ನು ಹೊರಗಟ್ಟಿ ಅಲ್ಲಿನ ಜನರಿಗೆ ಉದ್ಯೋಗ ಕೊಡಿಸಲು ಮುಂದಾಗಿದೆ.
ಅಮೇರಿಕಾವು ಕಪಟತನ ತೋರುತ್ತಿದೆ. ತುರ್ಕಿಯಲ್ಲಿ ಉರ್ದುಗಾನ್ ಮದ್ಯವನ್ನು ನಿಷೇಧಿಸಿದಾಗ ಜನರು ಇಸ್ತಾಂಬುಲಿನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾಕಾರರಿಗೆ ಅಮೇರಿಕಾವು ಬಹಿರಂಗವಾಗಿ ಬೆಂಬಲ ನೀಡಿತ್ತು. ಆದರೆ ಈಜಿಪ್ಟಿನ ರಾಬಿಯಾ ಅದವಿಯ್ಯ ಸೇರಿ ಮೂರು ಸ್ಕ್ವಾರ್‍ಗಳಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ರಾತ್ರಿ-ಹಗಲೆನ್ನದೆ ಪ್ರಜಾಪ್ರಭುತ್ವಕ್ಕಾಗಿ ಪ್ರತಿಭಟನೆ ನಡೆಸಿದಾಗ ಅಮೇರಿಕಾವು ಅವರಿಗೆ ಒಮ್ಮೆಯೂ ಬೆಂಬಲ ನೀಡಿಲ್ಲ.
ಯೂರೋಪಿಯನ್ ರಾಷ್ಟ್ರಗಳ ಪೈಕಿ ಜರ್ಮನಿಯು ಮುರ್ಸಿಯವರ ಪರವಾಗಿ ಧ್ವನಿ ಎತ್ತಿತ್ತು. ಈಜಿಪ್ಟಿನ ಹುಸ್ನಿ ಮುಬಾರಕ್‍ರ ಕೈಗೊಂಬೆಗಳಾದ ಪತ್ರಿಕೆಗಳು ಮುರ್ಸಿಯವರನ್ನು ಹಿಟ್ಲರ್‍ನಿಗೆ ಹೋಲಿಸಿತು. 60 ಲಕ್ಷದಷ್ಟು ಯಹೂದಿಯರನ್ನು ಕೊಂದ ಹಿಟ್ಲರ್‍ನಿಗೂ ಯಾವುದೇ ನಿರಪರಾಧಿಯ ಹಕ್ಕುಗಳನ್ನು ದಮನಿಸದ ಮುರ್ಸಿಯವರಿಗೂ ಯಾವ ಹೋಲಿಕೆ ಎಂದು ಜರ್ಮನಿ ಕುಹಕವಾಡಿತು.

ಹಲವಾರು ವಿಶೇಷ ವ್ಯಕ್ತಿಗಳು ಪ್ರತಿಭಟನೆ ನಡೆಯುತ್ತಿದ್ದ ಸ್ಕ್ವಾರ್‍ಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಜನರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ಪತ್ರಿಕೆಗಳ ವರ್ತನೆಗಳಿಂದಾಗಿ ಹಲವರು ಬೇಸತ್ತು ಹೋಗಿದ್ದರು. ಪತ್ರಿಕೆಗಳು ಇಲ್ಲದ ವಾರ್ತೆಗಳನ್ನು ಸೃಷ್ಟಿಸಿ ದಿನ ಬೆಳಗಾಗುವುದರೊಳಗೆ ಈಜಿಪ್ಟಿನ ಕುರಿತ ಜಗತ್ತಿನ ದೃಷ್ಟಿಕೋನವನ್ನೇ ಬದಲಿಸುತ್ತಿದ್ದವು. ಕ್ರಿಸ್ಪನ್ ಬ್ಲೆಂಟ್ ಈಜಿಪ್ಟಿನ ಪತ್ರಿಕೆಗಳ ಕುರಿತು "ಆಕ್ರಮಣಕಾರಿ ವಾರ್ತೆಗಳೊಂದಿಗೆ ಪ್ರಭಾತದಲ್ಲಿ ಹಾಜರಾಗುವ ದರೋಡೆಕೋರರು" ಎಂದು ಹೇಳಿದ್ದಾರೆ. ಮುರ್ಸಿಯವರು ಅಧಿಕಾರಕ್ಕೆ ಏರಿದಾಗ ಪತ್ರಿಕೆಗಳಿಗೆ ಅವರು ಸ್ವಾತಂತ್ರ್ಯ ನೀಡಿದ್ದರು. ಆದರೆ ಇದೇ ಅವರಿಗೆ ಕುತ್ತಾಯಿತು. ಪತ್ರಿಕೆಗಳು ಮುರ್ಸಿಯವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನೆಲ್ಲಾ ಹೊರಿಸಿ ಅವರು ಅಧಿಕಾರದಿಂದಿಳಿಯುವಂತೆ ಮಾಡಿದವು.
ದುಷ್ಟ ಶಕ್ತಿಗಳಿಗೆ ಮುರ್ಸಿಯವರು ಬೇಡವಾಗಿದ್ದರು. ಅರಬ್ ವಸಂತದ ಭಾಗವಾಗಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಹೊಸಕಿ ಹಾಕುವ ನಿಟ್ಟಿನಲ್ಲಿ ಅಮೇರಿಕಾ ಹಾಗೂ ಯೂರೋಪ್‍ನ ಕೆಲವು ರಾಷ್ಟ್ರಗಳು ಸೇರಿ ಈಜಿಪ್ಟಿನಲ್ಲಿ ಸೇನಾ ಬುಡಮೇಲು ಕೃತ್ಯವನ್ನು ಆಯೋಜಿಸಿದ್ದವು. ಮುರ್ಸಿಯವರು ಅಧಿಕಾರಕ್ಕೇರಿದಾಗ ಕೇವಲ ದೂರವಾಣಿ ಮೂಲಕ ಅಭಿನಂದಿಸಿದವರು ಬಳಿಕ ಸೇನೆಯು ಆಡಳಿತಕ್ಕೇರಿದಾಗ ನೇರವಾಗಿ ಈಜಿಪ್ಟಿಗೆ ಬಂದು ಅಭಿನಂದನೆ ಸಲ್ಲಿಸಿದ್ದರು. ಸೇನೆಯ ಬುಡಮೇಲು ಕೃತ್ಯ ನಡೆಸುವುದಕ್ಕಿಂತ ಮುಂಚೆ ಹೊರಗಿನ ಶಕ್ತಿಗಳ ನೆರವಿನೊಂದಿಗೆ ಅದಕ್ಕಿರುವ ತಯಾರಿಗಳನ್ನು ತೆರೆಮರೆಯಲ್ಲಿ ನಡೆಸಿತ್ತು. ಮುರ್ಸಿಯವರ ಆಡಳಿತ ಕಾಲದಲ್ಲಿ ಸೇನೆಯು ಕೃತಕ ಬರಗಾಲವನ್ನು ಸೃಷ್ಟಿಸಿತ್ತು. ಆರ್ಥಿಕವಾಗಿ ಶೇಕಡಾ 48ರಷ್ಟು ನಿಯಂತ್ರಣ ಹೊಂದಿರುವ ಸೇನೆಯು ಆಹಾರ ಸಾಮಗ್ರಿಗಳನ್ನು ತಡೆ ಹಿಡಿದಿತ್ತು. ಆಗ ಜನರು ಸರಕಾರದ ವಿರುದ್ಧ ದಂಗೆ ಎದ್ದರು. ಬಳಿಕ ಎಲ್ಲವೂ ಸೇನೆಗೆ ಅನುಕೂಲಕರವಾಗಿ ನಡೆಯಿತು. ಆದರೆ ಈಗ ಅಲ್ಲಿನ ಜನರಿಗೆ ಆಹಾರದ ಕೊರತೆಯಿಲ್ಲ. ಆಹಾರ ಸಾಮಗ್ರಿಗಳಿಗೆ ಬೆಲೆ ಕಡಿಮೆಯಾಗಿದೆ. ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ. ಇವೆಲ್ಲವೂ ಸೇನೆಯ ವಿರುದ್ಧದ ಸಾಮಾನ್ಯ ಜನರ ರೋಷವನ್ನು ತಾತ್ಕಾಲಿಕವಾಗಿ ದಮನಿಸಿದೆ.
ಇಂದು ಈಜಿಪ್ಟಿನಲ್ಲಿ ಹಲವಾರು ಮಂದಿ ಮುರ್ಸಿಯವರನ್ನೇ ಬಯಸುತ್ತಿದ್ದಾರೆ. ಅದಕ್ಕಾಗಿ ಮಹಿಳೆಯರು ಮಕ್ಕಳು ಎಂಬ ಬೇಧವಿಲ್ಲದೆ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೇನೆಯ ದುರಾಕ್ರಮಣಗಳಿಗೆ ಹಲವಾರು ಮಂದಿ ಜೀವ ತೆತ್ತಿದ್ದಾರೆ. ಮರಳಿ ಬರುತ್ತೇವೆ ಎಂಬ ಯಾವುದೇ ಖಾತ್ರಿಯಿಲ್ಲದೆ ತಾಯಿ ಮಕ್ಕಳು ಮನೆಯಿಂದ ಹೊರಟು ಬಂದಿದ್ದಾರೆ. ಪ್ರತಿಭಟನೆಯಲ್ಲಿ ಬ್ರದರ್‍ಹುಡ್‍ನ ನೇತಾರರ ಮಕ್ಕಳೂ ಪತ್ನಿಯರೂ ಭಾಗವಹಿಸಿದ್ದಾರೆ. ಅಲ್ಲಿ ಮೇಲು ಕೀಳು ಎಂಬ ಭಾವನೆ ಇಲ್ಲ. ಅಲ್ಲಿ ಮುಖ್ಯವಾಗಿರುವುದು ಪ್ರಜಾಫ್ರಭುತ್ವದ ಮರಳಿಕೆ ಮಾತ್ರ.
ರಾಬಿಯಾ ಅದವಿಯ್ಯದಲ್ಲಿ ಪ್ರತಿಭಟನೆಯ ವೇಳೆ ಹುತಾತ್ಮೆಯಾದ ತನ್ನ ಮುದ್ದಿನ ಮಗಳಿಗೆ ಮುಸ್ಲಿಮ್ ಬದ್ರರ್‍ಹುಡ್ ನೇತಾರರಾದ ಮುಹಮ್ಮದ್ ಅಲ್ ಬಲ್‍ದಗಿ ಪತ್ರ ಹೀಗಿದೆ. "ನನ್ನ ಮುದ್ದಿನ ಮಗಳೇ ದುಃಖದಿಂದ ನಿನಸಗೆ ಬೀಳ್ಕೊಡುವುದರ ಬದಲಾಗಿ ನಾಳೆ ಭೇಟಿಯಾಗೋಣ ಎನ್ನುತ್ತೇವೆ. ದುಷ್ಟರ ದುರಾಕ್ರಮಣಗಳಿಗೆ ನೀನು ಧೈರ್ಯದಿಂದ ಎದೆಯೊಡ್ಡಿ ನಿಂತೆ.
ರಾಬಿಯ ಅದವಿಯ್ಯದಲ್ಲಿ ನಾವು ಭೇಟಿಯಾದಾಗ, "ಒಂದೇ ಸ್ಕ್ವಾರ್‍ನಲ್ಲಿದ್ದರೂ ನಾವು ಬಹಳ ದೂರವಾಗಿದ್ದೇವೆ" ಎಂದು ನೀನು ಹೇಳಿದೆಯಲ್ಲವೇ. "ಮಗಳೇ ನಮಗೆ ಅನ್ಯೋನ್ಯವಾಗಿ ಪರಸ್ಪರ ಮಾತನಾಡಲು ಈ ಜೀವನದಲ್ಲಿ ಸಮಯ ಸಿಕ್ಕಿಲ್ಲ. ಆದ್ದರಿಂದ ನಮಗೆ ಸ್ವರ್ಗ ನೀಡಲು ನಾನು ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತೇನೆ. ನಮಗೆ ಮಾತನಾಡಲು ಅಲ್ಲಿ ಬೇಕಾದಷ್ಟು ಸಮಯ ಸಿಗಬಹುದಲ್ಲವೇ". ಓ ನನ್ನ ಮುದ್ದಿನ ಗಿಣಿಯೇ, ಕೊನೆಯದಾಗಿ ನಾನು ನಿನ್ನನ್ನು ಬೀಳ್ಕೊಡುತ್ತಿಲ್ಲ. ನಾಳೆ ಸ್ವರ್ಗದಲ್ಲಿ ಭೇಟಿಯಾಗೋಣ. ಸ್ವರ್ಗದ ಕೌಸರ್ ಸರೋವರದ ಬಳಿ ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳೊಂದಿಗೆ ವಿಹರಿಸೋಣ. ನಾನೂ ನಿನ್ನೊಂದಿಗೆ ಸೇರಿಕೊಳ್ಳುತ್ತೇನೆ. ನನಗಾಗಿ ಕಾಯುತ್ತಿರು."
ಇಂತಹ ಎಷ್ಟೋ ಹೆಣ್ಣು ಮಕ್ಕಳು ಪ್ರಾಣ ತೆತ್ತಿದ್ದಾರೆ. ಹಲವಾರು ಕನಸುಗಳನ್ನು ಹೊತ್ತವರು ಪ್ರತಿಭಟನೆಗಾಗಿ ಹೊರಟು ದೇವ ಮಾರ್ಗದಲ್ಲಿ ಹುತಾತ್ಮರಾಗಿದ್ದಾರೆ. ಇಲ್ಲಿ ಇನ್ನೂ ಕೂಡಾ ಹುತಾತ್ಮರ ಸಂಖ್ಯೆ ಹೆಚ್ಚಬಹುದು. ಬ್ರದರ್‍ಹುಡ್‍ನ ಹೋರಾಟಗಾರರಿಗೆ ಮರಣದ ಭಯವಿಲ್ಲ. ಬಳಿ ನಿಂತವರು ಗುಂಡೇಟಿಗೆ ಧರೆಗುರುಳುವಾಗಲೂ ಅವರ ಪಾದವು ಕಂಪನಗೊಂಡಿಲ್ಲ. ಹುತಾತ್ಮರಿಗೆ ಅಲ್ಲಾಹನು ನೀಡುವ ಪ್ರತಿಫಲವನ್ನು ಅವರು ತಿಳಿದುಕೊಂಡಿದ್ದಾರೆ. ಅವರು ಕುರ್‍ಆನನ್ನು ನಮ್ಮಂತೆ ಓದಿದ್ದಲ್ಲ. ಬದಲಾಗಿ ಅದರ ಆಳಕ್ಕಿಳಿದು ಮನವರಿಕೆ ಮಾಡಿದ್ದಾರೆ. ಸುಮ್ಮನೆ ಕುಳಿತರೆ ಸ್ವರ್ಗ ಪ್ರಾಪ್ತಿ ಅಸಾಧ್ಯ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಅಲ್ಲಾಹನು ಪ್ರಶ್ನಿಸುತ್ತಾನೆ, "ನೀವು ನಿರಾಯಾಸವಾಗಿ ಸ್ವರ್ಗವನ್ನು ಪ್ರವೇಶಿಸುವಿರೆಂದು ಭಾವಿಸಿರುವಿರಾ? ವಸ್ತುತಃ ನಿಮ್ಮಲ್ಲಿ ಯಾರೆಲ್ಲಾ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವವರು. ಅದಕ್ಕಾಗಿ ಸಹನೆ ಪಡುವವರು ಇದ್ದಾರೆಂದು ಅವನು ಇನ್ನೂ ಕಾಣಲೇ ಇಲ್ಲ." (3: 142)
ಅವರೊಡನೆ ಹೇಳಿರಿ, "ನೀವು ಮರಣ ಅಥವಾ ಹತ್ಯೆಯನ್ನು ಹೆದರಿ ಓಡುವುದಿದ್ದರೆ ನಿಮ್ಮ ಈ ಪಲಾಯನವು ನಿಮಗೇನೂ ಫಲಕಾರಿಯಾಗದು. ಆ ಬಳಿಕ ನಿಮಗೆ ಜೀವನದ ಸುಖವನ್ನು ಅನುಭವಿಸಲು ಅಲ್ಪಕಾಲ ಮಾತ್ರವೇ ಅವಕಾಶ ಸಿಗುವುದು." (33: 16)
ದಬ್ಬಾಳಿಕೆ ನಡೆಸಿದವರು ಇತಿಹಾಸದಲ್ಲಿ ಕೆಟ್ಟ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಅವರಿಗೆ ಜನರ ಶಾಪವನ್ನು ಮಾತ್ರಗಳಿಸಲು ಸಾಧ್ಯ. ಇತಿಹಾಸದ ಪುಟಗಳನ್ನು ತಿರುವಿದರೆ ಅದಕ್ಕೆ ಹಲವಾರು ಪುರಾವೆಗಳು ಲಭಿಸಬಹುದು. ಹಲವಾರು ಪ್ರವಾದಿಗಳ ಜೀವನವೇ ಅದಕ್ಕೆ ಸಾಕ್ಷಿಯಾಗಿದೆ. ಹೆಚ್ಚೇಕೆ, ಫಿರ್‍ಔನ್‍ನೇ ಅದಕ್ಕೆ ಜ್ವಲಂತ ಸಾಕ್ಷಿಯಾಗಿ ಇಂದು ಈಜಿಪ್ಟಿನಲ್ಲೇ ಪ್ರದರ್ಶಿತಗೊಳ್ಳುತ್ತಿದ್ದಾನೆ. ಎಂದು ಕೂಡಾ ಕೆಡುಕು ಹೆಚ್ಚು ಕಾಲ ಬಾಳ್ವಿಕೆ ಬರುವುದಿಲ್ಲ. ಕೆಡುಕಿನ ಅಂಧಕಾರವನ್ನು ಸೀಳುತ್ತಾ ಒಳಿತಿನ ಕಿರಣಗಳು ಖಂಡಿತವಾಗಿಯೂ ಪ್ರತ್ಯಕ್ಷಗೊಳ್ಳುವುದು. ಅದಕ್ಕಾಗಿರುವ ಪ್ರಯತ್ನದ ಹಾದಿಯಲ್ಲಿ ಹಲವಾರು ತೊಡಕುಗಳು ಎದುರಾಗಬಹುದು. ದೌರ್ಜನ್ಯ, ಅಕ್ರಮಗಳನ್ನು ಸಮರ್ಥವಾಗಿ ಎದುರಿಸದೆ ಒಳಿತಿನ ಉದಯಕ್ಕೆ ಬೇರೆ `ಶಾರ್ಟ್ ಕಟ್'ಗಳಿಲ್ಲ. ಈಜಿಪ್ಟಿನ ಪ್ರಜಾಪ್ರಭುತ್ವ ಪ್ರಿಯ ಜನರು ಅದನ್ನೇ ಮಾಡುತ್ತಿದ್ದಾರೆ.


Thursday 25 April 2013

ತಾಯಿ ಕಥೆ



ಮಕ್ಕಳಿಗೆ ತಂದೆಯೊಂದಿಗೆ ಮಾತನಾಡಲು ಭಯ . ಅವರ ಎಲ್ಲಾ ಬೇಡಿಕೆಗಳನ್ನು ತಾಯಿಗೆ ತಿಳಿಸುತ್ತಿದ್ದರು .ತಾಯಿ ತಂದೆಗೆ ತಿಳಿಸುತ್ತಿದ್ದಳು . ತಾಯಿ ಮಕ್ಕಳ ಪ್ರತಿನಿಧಿಯಂತಿದ್ದಳು . ಒಂದು ದಿನ ತಾಯಿ ಮರಣ ಹೊಂದಿದಳು . ಅದರೊಂದಿಗೆ ಮಕ್ಕಳ ಬೇಡಿಕೆಗಳೂ ನಿಂತವು .

Sunday 21 April 2013

ಅಡುಗೆ ತಯಾರಿ


ಬೆಳಿಗ್ಗೆ ಆಫೀಸಿಗೆ ಹೊರಡುವಾಗ “ಮಧ್ಯಾಹ್ನದ ಬಳಿಕ ರಜೆ ಹಾಕಬೇಕು” ಎಂಬ ಕಟ್ಟಾಜ್ಞೆಯನ್ನು ನನ್ನ ಮುದ್ದಿನ ಪತ್ನಿ ಶಮಾ ನೀಡಿದ್ದಳು. ಅದಕ್ಕೆ ಕಾರಣವೂ ಇತ್ತು. ರಾತ್ರಿ ಮನೆಯಲ್ಲಿ ಔತಣಕೂಟ ಏರ್ಪಾಟಾಗಿತ್ತು. ಗಲ್ಫ್‍ನಿಂದ ಬಂದ ಅವಳ ಅಣ್ಣ ಮತ್ತು ಆತನ ಪತ್ನಿ, ಮಕ್ಕಳು ಬರುವವರಿದ್ದರು. ಗಲ್ಫ್‍ನಲ್ಲೇ ಮನೆ ಮಾಡಿಕೊಂಡಿದ್ದ ಅವರು ಮಕ್ಕಳ ರಜೆಯ ಪ್ರಯುಕ್ತ ಊರಿಗೆ ಬಂದಿದ್ದರು.
ನಾನು ಬೆಳಿಗ್ಗೆ ಆಫೀಸಿಗೆ ತಲುಪಿ ಮಧ್ಯಾಹ್ನ ಮರಳುವುದಕ್ಕಿಂತ ಮುಂಚೆ ಏಳು ಬಾರಿ ಫೋನ್ ಮಾಡಿದ್ದಳು. ನನಗೆ ಮರೆವು ಸ್ವಲ್ಪ ಹೆಚ್ಚಾಗಿರುವುದರಿಂದ ಅವಳು ಆ ತರಹ ಕಾಲ್ ಮಾಡಿದ್ದಳು. ಪ್ರತೀ ಫೋನ್  ಕಾಲ್‍ಗಳು ಕೊನೆಗೊಂಡದ್ದು ಮಧ್ಯಾಹ್ನ ಬೇಗ ಬರಬೇಕು ಎಂಬ ಪ್ರೀತಿಯಿಂದ ಕೂಡಿದ ಮನವಿಯೊಂದಿಗಿತ್ತು. ಹಾಗೆ ನಾನು ಆಫೀಸಿನಲ್ಲಿ ರಜೆ ಪಡೆದು ಮನೆಗೆ ಮರಳಿದೆ. ಅವಳು ಬಾಗಿಲಿನಲ್ಲೇ ಕಾಯುತ್ತಿದ್ದಳು. ನನ್ನನ್ನು ಕಂಡು ಅತೀವ ಸಂತೋಷಗೊಂಡಿದ್ದಳು. ಕಾರಣ ನಾನು ಮಧ್ಯಾಹ್ನ ರಜೆ ಹಾಕಿ ಬರುತ್ತೇನೆಂದು ಅವಳು ನಂಬಿರಲಿಲ್ಲ.
ನನ್ನ ಬ್ಯಾಗನ್ನು ತೆಗೆದಿರಿಸಿ ವಸ್ತ್ರ ಬದಲಿಸಲು ಕಪಾಟಿನಿಂದ ಲುಂಗಿಯನ್ನು ನೀಡಿ ಅಡುಗೆ ಮನೆಗೆ ಹೋದಳು. ನಾನು ಬಟ್ಟೆ ಬದಲಿಸಿ ಊಟಕ್ಕೆ ಹೋದೆ. ಟೇಬಲಿನಲ್ಲಿ ಊಟ ಬಡಿಸಿಟ್ಟಿದ್ದಳು. ರಾತ್ರಿಗಿರುವ ತಯಾರಿಯ ಭರಾಟೆಯಲ್ಲಿ ಪದಾರ್ಥಕ್ಕೆ ಉಪ್ಪು ಸಪ್ಪೆಯಾಗಿತ್ತು. ಅದನ್ನು ಹೇಳಿದರೆ ನಾಲ್ಕು ಬೈಯುವಳೇ ಹೊರತು ಅಡುಗೆಯ ಮೇಲಿನ ಅವಳ ಅಸಾಮಥ್ರ್ಯದ ಕುರಿತು ಒಪ್ಪಿಕೊಳ್ಳಲಿಕ್ಕಿಲ್ಲ. ಅವಳ ಅಡುಗೆಯ ಕುರಿತು ನಾನು ಹೊಗಳಿದರೆ ಅವಳಿಗೆ ಖುಷಿಯೇ ಖುಷಿ. ಅಂದಿಡೀ ನನಗೆ ಪ್ರೀತಿಯ ಭರ್ಜರಿ ವರ್ತನೆ ಲಭ್ಯವಾಗುತ್ತಿತ್ತು. ಆ ಪದಾರ್ಥ ಎಷ್ಟೇ ಸಪ್ಪೆಯಾಗಿದ್ದರೂ ಸರಿ.
ಅವಳು ಕೂಡಾ ತಟ್ಟೆಗೆ ಅನ್ನ ಹಾಕಿ ನನ್ನ ಮುಂದೆ ಕುಳಿತಳು ನಾನು ಅವಳ ಮುಖವನ್ನೇ ನೋಡಿದೆ. ಆ ಸುಂದರ ಮುಖವು ಕೆಲಸದ ಒತ್ತಡದಿಂದ ಮಂಕಾಗಿರುವಂತೆ ಕಂಡಿತು. ಹಣೆಯಲ್ಲಿ ಬೆವರಿತ್ತು. ಅಯ್ಯೋ ಪಾಪ ಅನಿಸಿತು. ಅವಳು ತಿನ್ನುವುದರಲ್ಲೇ ನಿರತಳಾಗಿದ್ದಳು. ಮಧ್ಯೆ ಅವಳು ತಲೆ ಎತ್ತಿ ನೋಡಿದಾಗ ನಾನು ಅವಳನ್ನೇ ನೋಡುತ್ತಿದ್ದೆ.
“ಓಯ್, ಎನ್ರೀ ಹಾಗೆ ಗುರಾಯಿಸ್ತಿದ್ದೀರ. ನೀವು ನನ್ನನ್ನು ಮೊದಲ ಸಾರಿ ಕಂಡಂತೆ ನೋಡುತ್ತಿದ್ದೀರಲ್ಲಾ?”
“ಏನಿಲ್ಲ, ನೀನು ತುಂಬಾ ಮುದ್ದು ಅಲ್ವಾ. ಹಾಗೆ ನೋಡಿದೆ ಅಷ್ಟೇ”
ನಾನು ತಿಂದು ಮುಗಿಸಿದ ಮೇಲೆ ಕೈ ತೊಳೆದು ಬೆಡ್‍ರೂಮಿಗೆ ಹೋಗಿ ಹಾಸಿಗೆಯ ಮೇಲೆ ಮಲಗಿದೆ. ನನಗೆ ಸುಸ್ತಾಗಿತ್ತು. ಸ್ವಲ್ಪ ಹೊತ್ತಾದಾಗ “ಇಕೊಳ್ಳಿ ಎಲ್ಲಿದ್ದೀರಿ” ಎಂದು ಕೇಳುತ್ತಾ ಬಂದಳು. ನಾನು ನಿದ್ರೆ ಹತ್ತಿದವನಂತೆ ನಟಿಸಿದೆ. ಅವಳು ನನ್ನ ಕಾಲನ್ನು ತಟ್ಟುತ್ತಾ “ಹೋಯ್, ನಿಮ್ಮನ್ನು ಮಧ್ಯಾಹ್ನ ರಜೆ ಹಾಕಿ ಬರಲು ಹೇಳಿದ್ದು ಇಲ್ಲಿ ಮಲಗಲಿಕ್ಕಲ್ಲ. ಬೇಗ ರೆಡಿಯಾಗಿ. ಅಂಗಡಿಗೆ ಹೋಗಿ ಸಾಮಾನು ತರಲಿಕ್ಕುಂಟು. ಇನ್ನು ನಿದ್ದೆಯೆಲ್ಲಾ ರಾತ್ರಿ.”
ನಾನು ಒಲ್ಲದ ಮನಸ್ಸಿನಿಂದ ಎದ್ದೆ. ಅವಳು ದೊಡ್ಡ ಚೀಲ ತಂದು ಕೈಗಿತ್ತಳು. ಜೊತೆಗೆ ಯಾವೆಲ್ಲ ಸಾಮಾನು ತರಬೇಕು ಎಂದು ಬರೆದ ಇಷ್ಟುದ್ದದ ಲೀಸ್ಟು. ಅದರ ಕೊನೆಯಲ್ಲಿ ಅಡುಗೆಗೆ ಸಂಬಂಧಿಸದ “ಫೇರ್ ಆಂಡ್ ಲೌಲಿ” ಕ್ರೀಮು ಕೂಡಾ ಬರೆದಿತ್ತು. ಅಡುಗೆ ತಯಾರಿಸಲು ಈ ಕ್ರೀಮು ಯಾಕೆ ಎಂದು ನನಗೆ ಅರ್ಥವೇ ಆಗಲಿಲ್ಲ.
‘ಲೇ ಶಮಾ, ಇದೇನೇ, ಅಡುಗೆ ಸಾಮಾನಿನ ಪಟ್ಟಿಯಲ್ಲಿ ಫೇರ್‍ಆಂಡ್ ಲೌಲಿ. ಪದಾರ್ಥಕ್ಕೆ ಮಿಕ್ಸ್ ಮಾಡಲಿಕ್ಕುಂಟಾ!” ನಾನು ಜಿಜ್ಞಾಸೆ ತಾಳಲಾರದೆ ಕೇಳಿದೆ.
“ಆ ಕ್ರೀಮು ತರಲು ನಾನು ಮೂರು ವಾರಗಳಿಂದ ನಿಮ್ಮಲ್ಲಿ ಹೇಳುತ್ತಿದ್ದೇನೆ. ನೀವು ದಿನಾಲೂ ಅದನ್ನು ಮರೆತು ಬರುತ್ತೀರಿ. ಈಗ ನೀವು ಹೇಗೆ ಮರೀತೀರಿ ಅಂತ ನೋಡ್ತೇನೆ.” ನನ್ನ ಬೆನ್ನ ಹಿಂದಿನಿಂದ ದೂಡುತ್ತಾ ಹೇಳಿದಳು.
ನಾನು ಚೀಲ ಹಿಡಿದು ಅಂಗಡಿಗೆ ಹೊರಟೆ. “ರೀ ಬೇಗ ಬರಬೇಕು. ಇನ್ನು ಪತ್ರಿಕೆ ಓದುತ್ತಾ ಅಲ್ಲೇ ಕೂರಬೇಡಿ” ಎಂಬ ಸಲಹೆಯನ್ನು ನೀಡಿ ಬಾಗಿಲು ಮುಚ್ಚಿಕೊಂಡಳು.
ನಾನು ಅಂಗಡಿಗೆ ಹೋಗಿ ಸಾಮಾನಿನ ಪಟ್ಟಿಯ ಪ್ರಕಾರ ಖರೀದಿಸ ತೊಡಗಿದೆ. ಅರ್ಧ ಗಂಟೆಯ ಬಳಿಕ ಶಮಾ ಫೋನ್ ಮಾಡಿದಳು. “ರೀ ಎಲ್ಲಿದ್ದೀರಿ? ಎನ್ಮಾಡ್ತಿದ್ದೀರ? ಸಾಮಾನೆಲ್ಲಾ ಖರೀದಿಸಿ ಆಯ್ತಾ?” ಹೀಗೆ ಪ್ರಶ್ನೆಗಳ ಸುರಿಮಳೆಗೈದಳು.
“ಬರ್ತೇನೆ ಮಾರಾಯ್ತಿ. ಇಷ್ಟದ್ದದ ಪಟ್ಟಿ ಬರೆದು ಕೊಟ್ಟು ಬೇಗ ಬನ್ನಿ ಎಂದರೆ ಹೇಗೆ? ಎಲ್ಲವನ್ನೂ ಖರೀದಿಸುವುದು ಬೇಡ್ವಾ” ನಾನು ಸ್ವಲ್ಪ ಗರಂ ಆಗಿ ಹೇಳಿದೆ.
ಆಚೆ ಕಡೆಯಿಂದ ಮುಸಿ ಮುಸಿ ನಗು ಕೇಳಿಸಿತು. “ರೀ ಬರುವಾಗ ಜಾಗ್ರತೆ ರಸ್ತೆ ದಾಟುವಾಗ ಆಚೀಚೆ ನೋಡ್ಕೊಳ್ಳಿ ಆಯ್ತಾ! ಓಕೆ ಬಾೈ. ಐ ಲವ್ ಯು” ಎಂದು ಫೋನಿಟ್ಟಳು. ಚಿಕ್ಕ ಮಕ್ಕಳೊಂದಿಗೆ ಹೇಳುವಂತಿದ್ದರೂ ಅವಳಿಗೆ ನನ್ನ ಮೇಲಿನ ಕಾಳಜಿಯನ್ನು ಕಂಡು ಪ್ರೀತಿ ಉಕ್ಕಿ ಬಂತು.
ನಾನು ಸಾಮಾನು ಖರೀದಿಸಿ ತಂದಾಗ ಗಂಟೆ ನಾಲ್ಕಾಗಿತ್ತು. ಶಮಾ ಒಣಗಿದ ಬಟ್ಟೆಗಳನ್ನು ತೆಗೆದು ಒಳ ಹೋಗುತ್ತಿದ್ದಳು. ನನ್ನನ್ನು ಕಂಡು ನಸು ನಕ್ಕು “ಫೇರ್ ಆಂಡ್ ಲೌಲಿ ತಂದಿದ್ದೀರ” ಎಂದು ಕೇಳಿದಳು.
“ಆಯ್ಯೋ, ಸಾರಿ ಕಣೇ, ನಾನು ಮರೆತು ಬಂದೆ” ನಾನು ಮರೆತವನಂತೆ ತಲೆ ಮೇಲೆ ಕೈಯಿರಿಸಿ ಹೇಳಿದೆ.
“ಹೌದಾ! ನೀವು ಒಳಗೆ ಬನ್ನಿ, ಮಾಡ್ತೇನೆ ನಿಮಗೆ” ಒಳಗೆ ಬಂದು ಎದುರಾಗಿ ನಿಂತಳು.
“ಓಹ್, ತಂದಿದ್ದೇನೆ ಮಾರಾಯ್ತಿ. ಇನ್ನು ಒಳಗೆ ಹೊಕ್ಕುವಾಗಲೇ ಕಿವಿಹಿಂಡುವುದು ಬೇಡ” ನಾನು ವ್ಯಂಗ್ಯವಾಗಿ ಹೇಳಿದೆ.
ನಾನು ಚೀಲವನ್ನು ಅಡುಗೆ ಕೋಣೆಯಲ್ಲಿರಿಸಿದೆ. ಅವಳು ಬಟ್ಟೆಯನ್ನು ರೂಮಿನಲ್ಲಿ ಬೆಡ್ ಮೇಳೆ ಹಾಕಿ ಬಂದಳು. ನನ್ನ ಭುಜದ ಮೇಲೆ ಕೈಯಿರಿಸಿ "ಪ್ಲೀಸ್ ರೀ ಆ ಬಟ್ಟೆಯನ್ನೆಲ್ಲಾ ಮಡಚಿಡ್ತೀರಾ?” ಎಂದು ಪ್ರೀತಿಯಿಂದ ಹೇಳಿದಳು.
“ನೀನೊಮ್ಮೆ ಹೋಗು ಮಾರಾಯ್ತಿ. ಸುಮ್ಮನೆ...” ನಾನು ಹುಸಿ ಕೋಪದೊಂದಿಗೆ ಅವಳ ಕೈಯನ್ನು ನನ್ನ ಭುಜದಿಂದ ಕೆಳಗಿರಿಸಿದೆ. ಅವಳು ಕಣ್ಣು ಕಿರಿದಾಗಿಸಿ ಪ್ಲೀಸ್ ಪ್ಲೀಸ್ ಎಂದಾಗ ನಾನು ನಸುನಕ್ಕು ಬೆಡ್‍ರೂಮಿಗೆ ಹೋದೆ.
ಚಹಾ ಕುಡಿದ ನಂತರ ಅಡುಗೆ ಕೆಲಸ ಆರಂಭವಾಯಿತು. ನಾನು ಟಿ.ವಿ. ನೋಡಲು ಕುಳಿತೆ. ಸ್ವಲ್ಪ ಹೊತ್ತಾದಾಗ ಅಡುಗೆ ಮನೆಯಿಂದ “ರೀ ಎಲ್ಲಿದ್ದೀರಿ. ಸ್ವಲ್ಪ ಈ ಕಡೆ ಬರ್ತೀರಾ” ಎಂಬ ಕರೆ ಬಂತು. ನಾನು ಅತ್ತ ಗಮನಹರಿಸಲಿಲ್ಲ. ಟಿ.ವಿ. ನೋಡುವುದರಲ್ಲೇ ತಲ್ಲೀನನಾದೆ. ಬಳಿಕ ಅವಳೇ ಬಂದು ನನ್ನ ಕತ್ತು ಬಳಸಿ ಹೇಳಿದಳು. “ಅಲ್ಲಿ ಅಡುಗೆ ಮನೆಯಲ್ಲಿ ಅಷ್ಟೆಲ್ಲಾ ಕೆಲಸ ಇರುವಾಗ ನೀವು ಇಲ್ಲಿ ಟಿ.ವಿ. ನೋಡ್ತಾ ಕುಳಿತಿದ್ದೀರಾ. ನನಗೆ ಸ್ವಲ್ಪ ಸಹಾಯ ಮಾಡ್ಬಾರ್ದಾ?”
“ಹೌದಾ, ನೀನು ಮೊನ್ನೆ ಹೇಳಿದೆ, ಅಡುಗೆಗೆ ಪುರುಷರ ಕೈತಾಗಿದರೆ ರುಚಿಯೆಲ್ಲಾ ಹೋಗುತ್ತದೆ ಎಂದು. ಈಗ ನಾನು ಬೇಕಾ?” ನಾನು ಚಾನೆಲ್ ಬದಲಿಸುತ್ತಾ ಹೇಳಿದೆ.
“ಅದು ನಾನು ಸುಮ್ಮನೆ ಹೇಳಿದ್ದಲ್ವಾ. ಈಗ ಬನ್ನಿ, ಪ್ಲೀಸ್” ಎಂದು ನನ್ನ ತೋಳು ಹಿಡಿದು ಎಳೆದಳು. ಅವಳ ಕೊಂಡಾಟದ ಮುಂದೆ ನಾನು ಸೋತೆ.
ನನಗೆ ಅಡುಗೆ ಮನೆಯಲ್ಲಿ ತರಕಾರಿ ಹಚ್ಚುವ ಘನ ಜವಾಬ್ದಾರಿ ಸಿಕ್ಕಿತು. ಮೊದಲಿಗೆ ನೀರುಳ್ಳಿಯನ್ನು ಹಚ್ಚಿದೆ. ಕಣ್ಣಿನಲ್ಲಿ ನೀರು ಬರಲು ಪ್ರಾರಂಭಿಸಿತು.
“ಇದೇನ್ರಿ, ಆಮ್ಲೆಟ್ ಮಾಡ್ಲಿಕ್ಕೆ ನೀರುಳ್ಳಿ ಹಚ್ಚುವುದಾ? ನಾನು ಹೇಳಿದ್ದು ಬಿರಿಯಾಣಿ ಮಸಾಲಕ್ಕೆ. ಉದ್ದುದ್ದ ಕೊಯ್ಯಿರಂತೆ” ಆಜ್ಞೆ ನೀಡಿದಳು.
“ಇಲ್ಲಿ ಕಣ್ಣು ಉರೀತಾ ಉಂಟು ಮಾರಾಯ್ತಿ.” ನಾನು ಕಣ್ಣುಜ್ಜುತ್ತಾ ಹೇಳಿದೆ.
“ಅದಕ್ಕೇ, ಬೇಗ ಬೇಗ ಹಚ್ಚಿರಿ. ಈಗ ಗೊತ್ತಾಯ್ತಾ ಅಡುಗೆಯ ಕಷ್ಟ”
ಟೊಮೆಟೋ, ಸೌತೆಕಾಯಿ, ಅಲಸಂಡೆ ಮೊದಲಾದ ತರಕಾರಿಗಳು ನನ್ನ ಮುಂದೆ ಬಿದ್ದವು. ಅದನ್ನು ಹಚ್ಚುವ ರೀತಿಯನ್ನೂ ಹೇಳಿಕೊಟ್ಟಳು. ಯಾವ ತರಕಾರಿ ಯಾವ ಆಕೃತಿಯಲ್ಲಿ ಕೊಯ್ಯಬೇಕು ಎಂದು ಪಾಠ ಹೇಳಿದಂತೆ ಹೇಳಿಕೊಟ್ಟಳು.
ಅವನ್ನೆಲ್ಲಾ ಹೇಗೆ ಕೊಯ್ಯಬೇಕು ಎಂದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಅಡುಗೆ ಮಾಡುವುದರಲ್ಲಿ ಅಷ್ಟು ಹಿಂದೇನೂ ಅಲ್ಲ. ಮದುವೆಗಿಂತ ಮುಂಚೆಯೇ ನನಗೆ ಅಡುಗೆ ಕಲಿಯುವ ಸಂದರ್ಭ ಬಂದಿತ್ತು. ಅಡುಗೆಯನ್ನೂ ಕಲಿತಿದ್ದೇನೆ. ಆದರೆ ಈ ವಿಷಯವನ್ನು ನಾನು ನನ್ನ ಶಮಾಳಿಗೆ ಈವರೆಗೂ ಹೇಳಲಿಲ್ಲ. ಹೇಳಿದರೆ ಅಡುಗೆಯ ಹಲವು ಕೆಲಸಗಳು ನನ್ನ ತಲೆಗೆ ಬೀಳಬಹುದು. ನನಗೆ ಅಡುಗೆ ಮಾಡಲು ಹೇಳಿ ಅವಳು ತಲೆನೋವೆಂದು ಮಲಗಬಹುದು.
ನಾನು ಮುಳ್ಳುಸೌತೆ ಕೊಯ್ಯುವಾಗ ಮಧ್ಯೆ ಮಧ್ಯೆ ಒಂದೊಂದು ತುಂಡನ್ನು ತಿನ್ನುತ್ತಿದ್ದೆ. “ಏನ್ರೀ ಇದು. ನಿಮ್ಮಲ್ಲಿ ತಿನ್ನಲಿಕ್ಕೆ ಹೇಳಿದ್ದಾ, ಅಲ್ಲ ತರಕಾರಿ ಹಚ್ಚಲಿಕ್ಕೆ ಹೇಳಿದ್ದಾ? ನೀವು ಹೀಗೆ ತಿಂದರೆ ಎರಡು ಕಿಲೋ ಪುನಃ ತರಿಸ್ಬೇಕಾಗಬಹುದು” ಅವಳು ಜೋರು ಮಾಡಿದಳು.
“ಅಲ್ಲ ಕಣೇ ಮುಳ್ಳುಸೌತೆ ಕಹಿ ಉಂಟಾಂತ ನೋಡಿದ್ದು” ನಾನು ಸ್ಪಷ್ಟೀಕರಣ ನೀಡಿದೆ.
“ಅದು ಒಂದು ತುಂಡು ತಿಂದರೆ ತಿಳಿಯುತ್ತೆ. ಅರ್ಧ ಸೌತೆ ತಿನ್ನಬೇಕೆಂದೇನಿಲ್ಲ.”
ಶಮಾ ತೀವ್ರ ಗಡಿಬಿಡಿಯಲ್ಲಿದ್ದಳು. ಅವಳಿಗೆ ನಾಲ್ಕು ಕೈಗಳಿರುತ್ತಿದ್ದರೂ ಅದು ಸಾಕಾಗುತ್ತಿರಲಿಲ್ಲ. ಅವಳು ಗಡಿಬಿಡಿಯಲ್ಲಿ ಬೇವುಸೊಪ್ಪು ತರಲು ಹಿತ್ತಿಲ ಕಡೆಗೆ ಹೋಗುವಾಗ ನಾನು ಕುಳಿತ ಕುರ್ಚಿಯ ಕಾಲು ಅವಳಿಗೆ ತಾಗಿತು. ಎಡವಿ ಬೀಳುವಂತಾದಳು. ತಿರುಗಿ ಬಂದು ನನ್ನ ಬೆನ್ನಿಗೆ ಒಂದು ಗುದ್ದು ನೀಡಿ ಹೇಳಿದಳು. “ನಿಮಗೆ ಕುರ್ಚಿಯನ್ನು ಸರಿ ಇಡಲಿಕ್ಕೆ ಆಗುವುದಿಲ್ಲಾ” ನನಗೆ ಅಯ್ಯೋ ಪಾಪ ಅನಿಸಿತು.
ಅಂತೂ ನೆಂಟರಿಷ್ಟರೆಲ್ಲಾ ಬಂದರು. ಶಮಾ ಅವರನ್ನು ಉಪಚರಿಸುವುದರಲ್ಲೇ ನಿರತಳಾದಳು. ಅಣ್ಣನೊಂದಿಗೆ ಭಾಭಿಯೊಂದಿಗೆಲ್ಲಾ ಹಲವು ವಿಷಯಗಳ ಕುರಿತು ಚರ್ಚಿಸಿದಳು. ಆದರೆ ಆ ವಿಷಯಗಳೆಲ್ಲಾ ನಾನು ಅವಳೊಂದಿಗೆ ಹೇಳಿದ ವಿಚಾರಗಳಾಗಿದ್ದವು. ಅವಳು ದೊಡ್ಡ ತಿಳುವಳಿಕೆ ಇರುವಂತೆ ಮಾತನಾಡುತ್ತಿದ್ದಳು. ಅವರೇನಾದರೂ ಮರು ಪ್ರಶ್ನೆ ಕೇಳಿದರೆ ತಬ್ಬಿಬ್ಬಾಗಿ ವಿಷಯ ಬದಲಾಯಿಸುತ್ತಿದ್ದಳು.
ಭರ್ಜರಿ ಊಟದ ವ್ಯವಸ್ಥೆಯೂ ಆಯಿತು. ಅವರನ್ನು ಉಪಚರಿಸಿ ನನ್ನ ಶಮಾ ಬಳಲಿ ಬೆಂಡಾಗಿದ್ದಳು. ಹಣೆಯಲ್ಲಿ ಬೆವರು ಹನಿಗಟ್ಟಿತ್ತು. ಮುದ್ದು ಮುಖವು ಬಾಡಿತ್ತು. ಹಾಗೆ ಅವರು ನಮ್ಮ ಆತಿಥ್ಯವನ್ನು ಸ್ವೀಕರಿಸಿ ಹೊರಟು ಹೋದರು. ಆಗ ನಾನು ನಿಟ್ಟುಸಿರು ಬಿಟ್ಟೆ. ದೊಡ್ಡ ಯುದ್ಧದಲ್ಲಿ ಭಾಗವಹಿಸಿ ಮರಳಿದಂತಾಗಿತ್ತು.
ಇನ್ನು ಅಡುಗೆ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ಬಾಕಿ ಉಳಿದಿತ್ತು. ತೊಳೆಯಬೇಕಾದ ಪಾತ್ರೆಯ ದೊಡ್ಡ ರಾಶಿಯೇ ಬಿದ್ದಿತ್ತು. ಅವಳು ಅದನ್ನು ತೊಳೆಯಲು ಹೊರಟಳು. “ಇಕೊಳ್ಳೇ ಅದನ್ನೆಲ್ಲಾ ಬೆಳಿಗ್ಗೆದ್ದು ತೊಳೆಯುವಾ. ಬೇಕಾದರೆ  ನಾನೂ ಸಹಾಯ ಮಾಡುತ್ತೇನೆ. ಈಗ ನೀನು ಆಯಾಸಗೊಂಡಿದ್ದೀ” ನಾನು ತೊಳೆಯುವ ಭರವಸೆ ನೀಡಿದೆ.
ನನಗೂ ಆಯಾಸವಾಗಿತ್ತು. ಕೈಕಾಲು ಮುಖ ತೊಳೆದು ನಾನು ಮಲಗಿದೆ. ಸ್ವಲ್ಪ ಹೊತ್ತಾದ ಮೇಲೆ ಶಮಾ ಬಂದು ಬಳಿ ಮಲಗಿದಳು.
“ಸುಮ್ಮನೆ ಮಲಗು ಮಾರಾಯ್ತಿ. ಬಾಕಿ ವಿಷಯವೆಲ್ಲಾ ಬೆಳಿಗ್ಗೆ ಮಾತಾಡೋಣ” ಎಂದು ನಾನು ಮಗ್ಗುಲು ಬದಲಿಸಿ ಮಲಗಿದೆ. ಆಯಾಸದಲ್ಲಿ ನಿದ್ದೆ ಹತ್ತಿದ್ದೇ ತಿಳಿಯಲಿಲ್ಲ.

Monday 21 January 2013

ಮಹಿಳೆಯರ ಮಾರ್ಕೆಟ್


ಮಣಿಪುರದ ರಾಜಧಾನಿ ಇಂಫಾಲಿಗೆ ಹೋದರೆ ಆ ಪ್ರದೇಶದ ಹೃದಯಭಾಗದಿಂದ ‘ಇದು ನಮ್ಮ ಏರಿಯಾ’ ಎಂಬ ಅಧಿಕಾರದ ಹೆಣ್ಣು ಧ್ವನಿ ನಿಮಗೆ ಕೇಳಿಸಬಹುದು. ಅಲ್ಲೊಂದು ಮಾರುಕಟ್ಟೆ ಇದೆ. ಅದರ ಹೆಸರು ‘ಇಮಾ ಕೆಯ್ತಲ್’ ಇಲ್ಲಿ ಕೇವಲ ಮಹಿಳಾ ವ್ಯಾಪಾರಿಗಳದ್ದೇ ಕಾರುಬಾರು. ಮಹಿಳಾ ಸಬಲೀಕರಣಕ್ಕೆ ಪ್ರಯತ್ನಿಸುವ ನಿಷ್ಠಾವಂತ ವ್ಯಾಪಾರಿಗಳಿವರು. ಮಹಿಳಾ ವ್ಯಾಪಾರಿಗಳು ಮಾತ್ರವಿರುವ ಜಗತ್ತಿನ ಏಕೈಕ ಮಾರುಕಟ್ಟೆ ಎಂಬ ಖ್ಯಾತಿ ಈ ಕೆಯ್ತಲ್ ಮಾರುಕಟ್ಟೆಗಿದೆ. ಆರ್ಥಿಕ ಸಬಲೀಕರಣದ ಮೂಲಕ ಸಮಾಜದ ಸಬಲೀಕರಣ ಹಾಗೂ ಸ್ವಾತಂತ್ರ್ಯ ಗಳಿಸಿದ ಮಹಿಳೆಯರ ಯಶೋಗಾಥೆ ಈ ಮಾರುಕಟ್ಟೆಗೆ ಹೇಳಲಿಕ್ಕಿದೆ.
ಮಣಿಪುರಿ ಭಾಷೆಯ ಇಮಾ ಎಂಬ ಪದಕ್ಕೆ ತಾಯಿ, ಅಮ್ಮ ಎಂದರ್ಥ. ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ವ್ಯಾಪಾರ ನಡೆಸುತ್ತಾರೆ. ಇವರ ಮಧ್ಯೆ ಸಂಬಂಧದಲ್ಲಿ ಒಡಕಿದ್ದಂತೆ ಕಂಡರೂ ಇವರು ಪರಸ್ಪರ ಒಗ್ಗಟ್ಟಿನಿಂದ ಬಾಳುವವರಾಗಿದ್ದಾರೆ. ಇಲ್ಲಿ ಸಿಗದ ವಸ್ತುಗಳಿಲ್ಲ. ಈ ಮಾರುಕಟ್ಟೆಯ ಒಳಹೊಕ್ಕರೆ ಎಲ್ಲಾ ಕಡೆಗಳಲ್ಲೂ ಮಹಿಳಾ ಮಣಿಗಳ ಸ್ವರವೇ ಕೇಳಿಸುತ್ತದೆ. ಇಲ್ಲಿನ ಮಹಿಳೆಯರು ದಿನ ದೂಡಲಿಕ್ಕಾಗಿ ವ್ಯಾಪಾರ ನಡೆಸುತ್ತಾರೆಯೇ ಹೊರತು ದೊಡ್ಡ ಶ್ರೀಮಂತ ವ್ಯಕ್ತಿಗಳಾಗಬೇಕು ಎಂಬ ಆಶೆಯು ಅವರಲ್ಲಿರುವುದಿಲ್ಲ. ಇವರ ಗಿರಾಕಿಗಳಿಗೂ ಇವರಿಗೂ ಚೌಕಾಸಿ ನಡೆಸುವ ಸಂಪ್ರದಾಯ ಇಲ್ಲವೇ ಇಲ್ಲ. ಬಟ್ಟೆಗಳಿಗೂ ತರಕಾರಿಗಳಿಗೂ, ಹಣ್ಣು ಹಂಪಲುಗಳಿಗೂ ಗೃಹಬಳಕೆಯ ವಸ್ತುಗಳಿಗೂ ಒಣ ವಿೂನಿಗೂ ಹಸಿ ವಿೂನಿಗೂ ಬೇರೆ ಬೇರೆ ವಿಭಾಗಗಳಿವೆ. ಆ ಮಾರ್ಕೆಟಿನ ಒಳ ಹೊಕ್ಕರೆ ಡೊಡ್ಡ ಶಾಪಿಂಗ್ ಮಾಲ್‍ಗಳಿಗೆ ಹೋಗುವುದಕ್ಕಿಂತ ಹೆಚ್ಚಿನ ಸಂತೋಷ ಲಭಿಸುತ್ತದೆ ಎಂಬುದು ಅನುಭವಿಗಳ ಮಾತು. ಮಣಿಪುರದ ಮಹಿಳೆಯರ ಶ್ರಮ ಜೀವನವನ್ನು ಕಂಡು ಶತಮಾನದ ಹಿಂದೆ ಆಗಿನ ರಾಜರು ಈ ಮಾರುಕಟ್ಟೆ ತೆರೆಯಲು ಅನುವು ಮಾಡಿಕೊಟ್ಟಿದ್ದರು. ಕೆಲವು ವರ್ಷಗಳ ಹಿಂದೆ ರಾಜ್ಯ ಸರಕಾರವು ಅವರಿಗೆ ಕಟ್ಟಡಗಳನ್ನು, ಕುಳಿತುಕೊಂಡು ವ್ಯಾಪಾರ ನಡೆಸಲು ಆಸನಗಳನ್ನೂ ನಿರ್ಮಿಸಿಕೊಟ್ಟಿತು.
ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಮಣಿಪುರವು ಸ್ವರ್ಗದಂತಿದೆ. ತೆಂಗನ್ನು ಹೊರತುಪಡಿಸಿ ಇಲ್ಲಿರುವ ಎಲ್ಲಾ ಸಸ್ಯಗಳೂ ಅಲ್ಲಿವೆ. ಅಲ್ಲಿ ಮಳೆಯು ಧಾರಾಳ ಸುರಿಯುವುದರಿಂದ ಎಲ್ಲೆಲ್ಲೂ ಮನಮುದಗೊಳಿಸುವ ಹಸುರಿನ ಹಾಸು. ಪ್ರಕೃತಿಯ ಮೇಲಿನ ಭೂಮಾಫಿಯಗಳ ಅತ್ಯಾಚಾರಕ್ಕೆ ಮಣಿಪುರವು ಇನ್ನೂ ಬಲಿಪಶುವಾಗಲಿಲ್ಲ ಎಂಬುದನ್ನು ಅಲ್ಲಿನ ಪ್ರಕೃತಿಯು ಸ್ಪಷ್ಟಪಡಿಸುತ್ತದೆ. ಅವರ ಕಿರಾತ ಕೈಗಳಿಗೆ ಮಣಿಪುರವು ಬಲಿಯಾಗದಿರಲಿ.
ಮಣಿಪುರದ ಮಹಿಳೆಯರ ಸಾಮಥ್ರ್ಯದ ಕುರಿತು ಜಗತ್ತು ಬೆರಗುಗಣ್ಣಿನಿಂದ ನೋಡುತ್ತದೆ. ಸೈನಿಕರಿಗೆ ಹೆಚ್ಚಿನ ಅಧಿಕಾರ ನೀಡಿದುದರ ವಿರುದ್ಧ ಕಳೆದ ಹದಿಮೂರು ವರ್ಷಗಳಿಂದ  ಸ್ವಯಂ ಒಂದು ತೊಟ್ಟು ನೀರನ್ನೂ ಕುಡಿಯದೆ ಆಮರಣಾಂತ ಉಪವಾಸ ಆಚರಿಸುತ್ತಿರುವ ಇರೋಮ್ ಶರ್ಮಿಳಾ ಲಂಡನ್ ಒಲಿಂಪಿಕ್ಸ್‍ನಲ್ಲಿ ಬಾಕ್ಸಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಮೇರಿ ಕೋಮ್ ಇವರೆಲ್ಲರೂ ಮಣಿಪುರದ ಮಹಿಳಾ ಮಣಿಗಳಾಗಿದ್ದಾರೆ. ಏನಾದರೂ ಮಾಡಲು ಹೊರಟರೆ ಅರ್ಧದಿಂದ ಬಿಟ್ಟೋಡದೆ ಅದನ್ನು ಸಾಧಿಸುವ ವರೆಗೆ ಅವರು ಪಡುವ ಪ್ರಯತ್ನಗಳು ಇಂದು ಜಗತ್ತು ಅವರನ್ನು ಗಮನಿಸುವಂತೆ ಮಾಡಿದೆ. ತನ್ನ ಗುರಿಯನ್ನು ಸಾಧಿಸಲಿಕ್ಕಾಗಿ ಏನು ಮಾಡಲಿಕ್ಕೂ ಅವರು ಸಿದ್ಧರಾಗುತ್ತಾರೆ.
ಭಾರತದ ಸ್ವಾತಂತ್ರ್ಯ ಸಮರದಲ್ಲಿ ಇಂಫಾಲಿನ ಈ ತಾಯಂದಿರ ವ್ಯಾಪಾರದ ಪಾತ್ರವೂ ಇದೆ. ಬ್ರಿಟಿಷರ ವಿರುದ್ಧ ‘ನೂಪಿಲಾನ್’ ಎಂದು ಕರೆಯಲ್ಪಡುವ ಮಹಿಳಾ ಸಮರವು ನಡೆದದ್ದು ಈ ಮಾರುಕಟ್ಟೆಯನ್ನು ಕೇಂದ್ರವಾಗಿಸಿಯಾಗಿತ್ತು. ಬಲಾತ್ಕಾರವಾಗಿ ದುಡಿಸಿದ್ದರ ವಿರುದ್ದ ಮೊದಲ ನೂಪಿಲಾನ್ ಸಮರವು ನಡೆಯಿತು. ಬೆಲೆ ಏರಿಕೆ, ಕಾನೂನು ಬಾಹಿರವಾಗಿ ಅಕ್ಕಿ ಸಾಗಾಟ ಮೊದಲಾದವುಗಳ ವಿರುದ್ಧ ಎರಡನೆ ಕಾಳಗ ನಡೆಯಿತು. ಈ ಎರಡೂ ಸಮರಗಳಲ್ಲಿ ಮಹಿಳೆಯರ ಒಗ್ಗಟ್ಟಿನ ಫಲವಾಗಿ ವಿಜಯವು ಅವರನ್ನು ಬಿಟ್ಟೋಡಲಿಲ್ಲ. ಭಾರತೀಯ ಮಹಿಳೆಯರ ಸಾಮಥ್ರ್ಯವನ್ನು ಕಂಡು ಬ್ರಿಟಿಷರೇ ದಂಗಾದರು.
ಒಂದನೇ ನೂಪಿಲಾನ್:
ಅಂದು ಮಹಾರಾಜರಿಂದ ಅಧಿಕಾರವನ್ನು ಬ್ರಿಟಿಷರು ಬಲಾತ್ಕಾರವಾಗಿ ಪಡೆದಿದ್ದರು. ಇದರ ದ್ವೇಷವು ಮಣಿಪುರಿಗಳ ಹೃದಯದಲ್ಲಿ ಹೊತ್ತಿ ಉರಿಯುತ್ತಿತ್ತು. ಅದು ಪ್ರತಿಕಾರದ ಅಗ್ನಿಯಾಗಿ ಧಗಧಗಿಸಿತು. ಇಂಗ್ಲಿಷ್ ಅಧಿಕಾರಿಯ ಅರಮನೆಗೆ ಸಮಾನವಾದ ಕಟ್ಟಡವನ್ನು ಅವರು ಬೆಂಕಿ ಹಚ್ಚಿ ದ್ವಂಸಗೊಳಿಸಿದರು. ಆ ಅರಮನೆಯನ್ನು ಪುನರ್ನಿರ್ಮಿಸಲು ಮರದ ದಿಮ್ಮಿಗಳನ್ನು ಮಣಿಪುರದ ಪುರುಷರು ಹೊತ್ತುತರಬೇಕೆಂದು ಸರಕಾರವು ಆಜ್ಞೆ ಹೊರಡಿಸಿತು. ಬಲಾತ್ಕಾರವಾಗಿ ಪುಕ್ಕಟೆ ಸೇವೆಗೆ ಪುರುಷರು ಹೊರಟಾಗ ಹಲವು ಮನೆಗಳಲ್ಲಿ ಹಸಿವು ತಾಂಡವವಾಡಿತು. ಆದಾಯ, ಸಂಪಾದನೆ ಇಲ್ಲದ್ದರಿಂದ ಮಾರುಕಟ್ಟೆಯು ಬಿಕೋ ಎನ್ನ ತೊಡಗಿತು. ವ್ಯಾಪಾರಿಗಳಾದ ಅಲ್ಲಿನ ಮಹಿಳೆಯರೆಲ್ಲಾ ಒಗ್ಗಟ್ಟಾದರು. ಒಂದು ದಿನದ ಮಟ್ಟಿಗೆ ಮಾರುಕಟ್ಟೆಯನ್ನು ಬಂದು ಮಾಡಿದರು. ಪ್ರತಿಭಟನೆಯೆಂಬಂತೆ ಬ್ರಿಟಿಷ್ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು. ಸೇನೆಯನ್ನು ಕರೆಸಿ ಪ್ರತಿಭಟನೆಯನ್ನು ತಹಬದಿಗೆ ತಂದರೂ, ಬಲಾತ್ಕಾರವಾಗಿ ಕೆಲಸಕ್ಕೆ ನೇಮಿಸಲ್ಪಟ್ಟವರಿಗೆ ವೇತನ ನೀಡಲು ಬ್ರಿಟಿಷ್ ಅಧಿಕಾರಿಗಳು ನಿರ್ಬಂಧಿತರಾದರು.
ಎರಡನೇ ನೂಪಿಲಾನ್
1904ರ ಹೋರಾಟದ ಯಶಸ್ವಿನಿಂದ ಇಮಾ ಕೆಯ್ತಲ್ ಬೀಗಿತ್ತು. 1939ರಲ್ಲಿ ಮಾರುಕಟ್ಟೆಗೆ ದಾನ್ಯಗಳು ತಲುಪದಿರುವುದು ಆ ಮಹಿಳೆಯರಿಗೆ ಕೋಪ ಬರಿಸಿತು. ಕಡಿಮೆ ಬೆಲೆಗೆ ಧಾನ್ಯಗಳನ್ನೆಲ್ಲಾ ಖರೀದಿಸಿ ಹೊರ ನಾಡುಗಳಿಗೆ ರಪ್ತು ಮಾಡುತ್ತಿರುವುದಾಗಿ ಅಲ್ಲಿನ ವ್ಯಾಪಾರಿಗಳಿಗೆ ತಿಳಿಯಿತು. ಮಾರುಕಟ್ಟೆಗೆ ಅಕ್ಕಿ ತಲುಪದ್ದರಿಂದ ಬೆಲೆ ಗಗನಕ್ಕೇರಿತು. ಡಿಸೆಂಬರ್ 12ರಂದು ಆ ತಾಯಂದಿರು ರಂಗಕ್ಕಿಳಿದರು. ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ರಾಜ್ಯ ದರ್ಬಾರಿನ ಮುಂದೆ ಜಮಾಯಿಸಿದರು. ರಾಜರ ಆದೇಶದಂತೆ ಧಾನ್ಯಗಳನ್ನು ರಪ್ತು ಮಾಡಲಾಗುತ್ತಿದೆ ಎಂದು ಬ್ರಿಟಿಷ್ ಅಧಿಕಾರಿಗಳು ಜಾಣೆಯ ಉತ್ತರ ನೀಡಿದರು. ಪ್ರವಾಸದಲ್ಲಿದ್ದ ರಾಜರು ತಮ್ಮ ಆಜ್ಞೆಯನ್ನು ಹಿಂಪಡೆಯುವ ವರೆಗೆ ಬ್ರಿಟಿಷ್ ಅಧಿಕಾರಿಯನ್ನು ಕದಲಲು ಆ ಮಹಿಳೆಯರು ಬಿಡಲಿಲ್ಲ. 1940 ಜನವರಿ 1ರ ವರೆಗೆ ಆ ಹೋರಾಟವು ಮುಂದುವರಿಯಿತು. ಆ ರಾಜ್ಯದ ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಏನೆಂಬುದನ್ನು ಆ ಹೋರಾಟಗಳು ಅನಾವರಣಗೊಳಿಸಿದವು.
ಇಮಾ ಕೆಯ್ತಾಲ್ ಮಾರುಕಟ್ಟೆಗೆ ವಸ್ತುಗಳನ್ನು ಖರೀದಿಸಲಿಕ್ಕಾಗಿ ಹೋಗುವವರು ಕೆಲವು ವಿಚಾರಗಳನ್ನು ತಿಳಿದಿರಬೇಕು. ತಾಯಿ ಎಂದು ಅರ್ಥವಿರುವ ಇಮಾ ಎಂದು ಅಲ್ಲಿನ ವ್ಯಾಪಾರಿಗಳನ್ನು ಕರೆಯಲಾಗುತ್ತದೆ. ವ್ಯಾಪಾರಿಗಳು ಮಹಿಳೆಯರು ಎಂದು ಭಾವಿಸಿ ಕೀಟಲೆ ಮಾಡುವುದನ್ನು, ದುಷ್ಟ ನೋಟ ಬೀರುವುದನ್ನು ಅವರು ಸಹಿಸುವುದಿಲ್ಲ. ಅದಕ್ಕೆ ಪ್ರಯತ್ನಿಸಿದವರು ಈ ತಾಯಂದಿರ ಕೈಯ ಬಿಸಿ ತಿಳಿಯುವರು. ತಿಳಿದಿದ್ದಾರೆ. ಆದ್ದರಿಂದ ಎಲ್ಲರೂ ಸಭ್ಯರಾಗಿಯೇ ಅವರೊಂದಿಗೆ ವರ್ತಿಸುತ್ತಾರೆ. ಅವರನ್ನು ಗೌರವಿಸುತ್ತಾರೆ.
ಈಶಾನ್ಯ ರಾಜ್ಯಗಳಲ್ಲಿ ಮುಂಜಾನೆ  4:30ಕ್ಕೆ ಸೂರ್ಯೋದಯವಾಗುತ್ತದೆ. ಆದ್ದರಿಂದಲೇ ಇಲ್ಲಿ ವಾಸಿಸುವ ಮಂದಿಯ ದಿನಚರಿಯು ಬೆಳ್ಳಂಬೆಳಿಗ್ಗೆಯೇ ಆರಂಭವಾಗುತ್ತದೆ. ಮಕ್ಕಳನ್ನು ಶಾಲೆಗೆ ಹೊರಡಿಸಿ, ಪತಿಗೆ ಆಹಾರ ತಯಾರಿಸಿ, ಮನೆಯ ಅತ್ಯಗತ್ಯದ ಕೆಲಸಗಳನ್ನೆಲ್ಲ ನಿರ್ವಹಿಸಿ ಆ ತಾಯಂದಿರು ವ್ಯಾಪಾರಕ್ಕೆ ಹೊರಡುತ್ತಾರೆ. ಒಂಭತ್ತು ಗಂಟೆಯಾಗುವಾಗ ವ್ಯಾಪಾರವು ಭರದಿಂದ ಸಾಗುತ್ತಿರುತ್ತದೆ. ತಂದ ವಸ್ತುಗಳನ್ನು ಒಂದು ಕಡೆ ಇರಿಸಿ ಅಲ್ಲಿ ಕುಳಿತುಕೊಳ್ಳುವರು. ಅದು ಖಾಲಿಯಾದಾಗ ಗಳಿಸಿದ ಅಲ್ಪ ಲಾಭದೊಂದಿಗೆ ಸಂತೋಷವಾಗಿ ಮನೆಗೆ ಮರಳುವರು. ಇಲ್ಲಿನಂತೆ ಅವರು ಯಾರನ್ನೂ ವಂಚಿಸುವುದಿಲ್ಲ. ನಿಯತ್ತಿನ ದುಡಿಮೆ ಅವರದ್ದು.
 ಹೊಲಗದ್ದೆಗಳಿಲ್ಲದವರು ವಿವಿಧ ರೀತಿಯ ಬಟ್ಟೆಬರೆಗಳನ್ನು ಮಾರಲು ತರುತ್ತಾರೆ. ದೊಡ್ಡ-ಪುಟ್ಟ ಹಲವಾರು ಜಲಾಶಯಗಳು ಮಣಿಪುರದಲ್ಲಿವೆ. ಈ ಜಲಾಶಯಗಳಿಂದ ಹಿಡಿದ ಮೀನುಗಳೂ ಈ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತವೆ. ಕೈಗೆಟಕುವ ದರದಲ್ಲಿ ವಿೂನು ಸಿಗುವುದರಿಂದ ಹೆಚ್ಚಿನವರ ಮನೆಯ ಪದಾರ್ಥವೂ ವಿೂನಾಗಿರುತ್ತದೆ.
ಇಂಫಾಲ್ ಮಾತ್ರವಲ್ಲದೆ ಮಣಿಪುರದ ಇತರ ಕಡೆಗಳಲ್ಲೂ ಮಹಿಳೆಯರು ಮಾತ್ರ ವ್ಯಾಪಾರ ನಡೆಸುವ ಮಾರುಕಟ್ಟೆಗಳಿವೆ. ವ್ಯಾಪಾರದ ಸರಕುಗಳನ್ನು ತರಲು ಸರಕಾರವು ಸಾರಿಗೆಯ ವ್ಯವಸ್ಥೆಯನ್ನು ಮಾಡಿದೆ. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಹೂಡಿಕೆಯಾಗುತ್ತದೆ ಎಂಬ ಮಾತು ಕೇಳಿದಾಗ ಆಗುವ ನಡುಕವೊಂದೂ ಇವರಲ್ಲಿ ಕಾಣಲು ಸಿಗುವುದಿಲ್ಲ. ಯಾರೇ ಬಂದು ವ್ಯಾಪಾರ ನಡೆಸಿದರೂ ಜನರಿಗೆ ಕಡಿಮೆ ಬೆಲೆಯಲ್ಲಿ ಮಾರಬೇಕೆಂಬುದೇ ಇಲ್ಲಿನ ಮಹಿಳಾ ವ್ಯಾಪಾರಿಗಳ ನಿಯಮ. ಇವರಷ್ಟು ಕಡಿಮೆ ಬೆಲೆಗೆ ಯಾವುದೇ ವ್ಯಾಪಾರಿಗಳಿಗೂ ವ್ಯಾಪಾರ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಈ ಮಹಿಳಾ ಮಣಿಗಳು ಸಾಬೀತು ಪಡಿಸಿದ್ದಾರೆ. ಕಾರಣ ಕುಟುಂಬದ ಖರ್ಚುಗಳನ್ನು ನಿಭಾಯಿಸುವ ಕೆಲಸ ಮಹಿಳೆಗಲ್ಲವೇ?

Friday 19 October 2012

ಮಲಾಲಳಿಗಾಗಿ ಮಿಡಿಯಿತು ಜಗತ್ತು



ಪಾಕಿಸ್ತಾನದ ಮಲಾಲ ಯೂಸುಫ್ ಝಾಯ್ ಎಂಬ ಬಾಲೆಯು ಈಗ ಜಗತ್ತಿನಾದ್ಯಂತ ಚರ್ಚಾ ವಿಷಯವಾಗಿದ್ದಾಳೆ. ಎಲ್ಲರ ಗಮನವೂ ಅವಳತ್ತ ಸರಿದಿದೆ. ಹಿರಿಯರು ಕಿರಿಯರು ಎಂಬ ಭೇದವಿಲ್ಲದೆ ಹಲವರು ಅವಳ ಪರವಾಗಿ ಬೀದಿಗಿಳಿದಿದ್ದಾರೆ. ಹಲವರು ತಮ್ಮ ಪ್ರಾರ್ಥನೆಯಲ್ಲಿ ಅವಳನ್ನು ಸೇರಿಸಿಕೊಂಡಿದ್ದಾರೆ.
ಹೌದು, ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾದ ಮಲಾಲ ಶಾಲೆಯಿಂದ ಮರಳುವಾಗ ಅವರ ಗುಂಡೇಟಿಗೆ ಗುರಿಯಾದಳು. ತಲೆಗೂ ಕುತ್ತಿಗೆಗೂ ಗುಂಡು ತಗಲಿ ಮಾರಣಾಂತಿಕವಾಗಿ ಗಾಯಗೊಂಡಳು. ತಾಲಿಬಾನಿಗಳ ಈ ಆಕ್ರಮಣಕ್ಕೂ ಕಾರಣವಿತ್ತು. ಪಾಕಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯವನ್ನು ಈಕೆ ಜಗತ್ತಿನ ಮುಂದೆ ತೆರೆದಿಟ್ಟಳು. ಅವರು ನಡೆಸುವ ಕ್ರೂರ ವರ್ತನೆಗಳು ಪಾಕಿಸ್ತಾನದ ಹೊರಗಿನವರಿಗೂ ಮನದಟ್ಟಾಯಿತು. ತಾಲಿಬಾನಿಗಳ ಪ್ರಕಾರ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತಿಲ್ಲ. ಇನ್ನು ಶಾಲೆಗೆ ಹೋಗುವುದಾದರೆ ಜೀವದ ಹಂಗು ತೊರೆದಿರಬೇಕು. ಇಂತಹ ಪರಿಸ್ಥಿತಿ ನಿರ್ಮಾಣವಾಗುವಾಗ ಮಲಾಲಳಿಗೆ ಕೇವಲ ಹನ್ನೊಂದು ವರ್ಷ. ಈಕೆ ಡೈರಿಯಲ್ಲಿ ದೈನಂದಿನ ಅನುಭವಗಳನ್ನು ಶುರು ಮಾಡಿದಳು. ಉರ್ದು ಭಾಷೆ ಚೆನ್ನಾಗಿ ಬಲ್ಲ ಆಕೆ ತನ್ನ ಅನುಭವಗಳ ಬರವಣಿಗೆಗೂ ಅದೇ ಭಾಷೆ ಬಳಸಿಕೊಂಡಳು. ಆ ಬರಹಗಳೆಲ್ಲ್ಲವೂ ಹೃದಯಕ್ಕೆ ನಾಟುವಂತಿದ್ದವು. ಆಕೆಯ ಡೈರಿಯ ಕೆಲವು ತುಣುಕುಗಳು ಇಲ್ಲ್ಲಿವೆ.
ಜನವರಿ 3 ಶನಿವಾರ, ತಲೆಬರಹ: ‘ಭಯವಾಗುತ್ತಿದೆ’.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಾಲ 
ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್‍ಗಳು ಮತ್ತು ತಾಲಿಬಾನಿಗಳು ಬರುತ್ತಿದ್ದಾರೆ. ನಮ್ಮ ಸ್ವಾತ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಪ್ರಾರಂಭವಾದಂದಿನಿಂದ ಇಂತಹ ಭಯಾನಕ ಕನಸುಗಳು ಬೀಳುತ್ತಿವೆ. ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನಿಗಳು ನಿಷೇಧಿಸಿದ್ದರಿಂದ ನನಗೆ ಭಯವಾಗುತ್ತಿದೆ. 27 ಮಂದಿಯಲ್ಲಿ 11 ಮಂದಿ ಮಾತ್ರ ಕ್ಲಾಸಿಗೆ ಹಾಜರಾಗಿದ್ದರು. ತಾಲಿಬಾನಿಗಳ ಆದೇಶದಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ನನ್ನ ಮೂವರು ಗೆಳತಿಯರು ಹೆದರಿಕೆಯಿಂದ ಕುಟುಂಬದೊಂದಿಗೆ ಇಲ್ಲಿಂದ ಹೊರಟು ಹೋಗಿದ್ದಾರೆ.
ಒಮ್ಮೆ ನಾನು ಶಾಲೆಯಿಂದ ಮರಳಿ ಬರುವಾಗ “ನಿನ್ನನ್ನು ಸಾಯಿಸ್ತೀನಿ” ಎಂದು ಹಿಂದಿನಿಂದ ಓರ್ವ ವ್ಯಕ್ತಿ ಕಿರುಚುವುದು ಕೇಳಿಸಿತು. ನಾನು ಗಾಬರಿಯಾಗಿ ನಡೆಯುವ ವೇಗ ಹೆಚ್ಚಿಸಿದೆ. ಸ್ವಲ್ಪ ಮುಂದೆ ಸಾಗಿ ತಿರುಗಿ ನೋಡಿದೆ. ಆತ ನನ್ನನ್ನು ಹಿಂಬಾಲಿಸುತ್ತಿಲ್ಲ ಎಂದು ಸಮಾಧಾನವಾಯಿತು. ಆತ ಫೋನಿನಲ್ಲಿ ಯಾರಿಗೋ ಬೆದರಿಕೆ ಹಾಕುತ್ತಿದ್ದ ಎಂಬುದನ್ನು ಅರಿತು ನಿರಾಳಳಾದೆ.
ಜನವರಿ 4 ಆದಿತ್ಯವಾರ, ತಲೆಬಹರಹ: ಶಾಲೆಗೆ ಹೋಗಬೇಕು.
ಇಂದು ಶಾಲೆಗೆ ರಜೆ. ಹಾಗಾಗಿ ತಡಮಾಡಿ ಎದ್ದೆ. ಆಗ ಹತ್ತುಗಂಟೆಯಾಗಿತ್ತು. ಗ್ರೀನ್ ಚೌಕದಲ್ಲಿ ಕೊಲ್ಲಲ್ಪಟ್ಟ ಮೂವರ ಕುರಿತು ತಂದೆಯವರು ಮಾತನಾಡುತ್ತಿದ್ದುದನ್ನು ಕೇಳಿ ಬೇಸರವಾಯಿತು. ಸೈನಿಕ ಕಾರ್ಯಾಚರಣೆ ಆರಂಭಗೊಳ್ಳುವುದಕ್ಕಿಂತ ಮುಂಚೆ ಆದಿತ್ಯವಾರ ನಾವೆಲ್ಲರೂ ಎಲ್ಲಿಗಾದರೂ ಸುತ್ತಾಡಲು ಹೋಗುತ್ತಿದ್ದೆವು. ಆದರೆ ಈಗ ಅದು ಅಸಾಧ್ಯವಾಗಿದೆ. ಪಿಕ್ನಿಕ್ಕಿಗೆ ತೆರಳಿ ವರ್ಷದ ಮೇಲಾಯಿತು.
ರಾತ್ರಿ ಊಟದ ಬಳಿಕ ಒಂದಿಷ್ಟು ತಿರುಗಾಡಿ ಬರುತ್ತಿದ್ದೇವು. ಈ ಸೂರ್ಯನು ಮುಳುಗುವುದರೊಂದಿಗೆ ನಾವು ಕೂಡಾ ಮನೆ ಸೇರಬೇಕು. ಇಂದು ನಾನು ತಾಯಿಗೆ ಮನೆಕೆಲಸಕ್ಕೆ ನೆರವಾಗಿ ಹೋಮ್ ವರ್ಕ್ ಮುಗಿಸಿ ತಮ್ಮನ ಜೊತೆ ಸ್ವಲ್ಪ ಆಟವಾಡಿದೆ. ನಾಳೆ ಶಾಲೆಗೆ ಹೋಗುವಾಗ ಏನಾಗುತ್ತದೋ ಎಂದು ನೆನೆಸುವಾಗಲೇ ಮೈ ಜುಂಮ್ಮೆನ್ನುತ್ತದೆ.
ಜನವರಿ 5 ಸೋಮವಾರ, ತಲೆಬರಹ: ಬಣ್ಣದ ಬಟ್ಟೆಗಳನ್ನೂ ಧರಿಸಬಾರದು.
ಶಾಲೆಗೆ ಹೋಗುವ ನಿಟ್ಟಿನಲ್ಲಿ ಯೂನಿಫಾರ್ಮ್ ಧರಿಸಲು ಅಣಿಯಾದಾಗ ಪ್ರಿನ್ಸಿಪಾಲ್ ಮುಂಚಿನ ದಿನ ಹೇಳಿದ್ದು ನೆನಪಾಯಿತು. “ಸಮವಸ್ತ್ರ ಧರಿಸಿ ನಾಳೆ ಬರಬೇಡಿ ಸಾದಾ ಉಡುಪಿನಲ್ಲೇ ಬನ್ನಿ” ಎಂದಿದ್ದರು. ನಾನು ನನ್ನ ಗುಲಾಬಿ ಬಣ್ಣದ ಬಟ್ಟೆ ತೊಟ್ಟು ಹೋದೆ. ಸಹಪಾಠಿಗಳೆಲ್ಲ ಬಣ್ಣ ಬಣ್ಣದ ವಸ್ತ್ರ ಧರಿಸಿದ್ದರು.
ಶಾಲೆಯಿಂದ ಬಂದು ಊಟ ಮುಗಿಸಿ ಟ್ಯೂಷನ್ನಿಗೆ ಹೋಗಿ ಬಂದೆ. ರಾತ್ರಿ ವಾರ್ತೆ ವೀಕ್ಷಿಸಿದಾಗ ಕಳೆದ 15 ದಿನಗಳಿಂದ ವಿಧಿಸಿದ್ದ ಕಫ್ರ್ಯೂ ಹಿಂತೆಗೆದುಕೊಂಡ ವಿಚಾರ ತಿಳಿದು ಸಂತಸವಾಯಿತು. ಕಾರಣ ನನ್ನ ಇಂಗ್ಲಿಷ್ ಟೀಚರ್ ಅಲ್ಲಿ ವಾಸವಾಗಿದ್ದರು. ಬಹುಶಃ ಅವರು ನಾಳೆ ಶಾಲೆಗೆ ಬರಬಹುದು.
ಜನವರಿ 7 ಬುಧವಾರ, ತಲೆಬರಹ: ಗುಂಡಿನ ಸದ್ದಿಲ್ಲ. ಭಯವೂ ಇಲ್ಲ.
ಮೊಹರ್ರಮ್ ರಜೆಯ ಪ್ರಯುಕ್ತ ಬುನೈರಿಗೆ ಕುಟುಂಬ ಸಮೇತ ಬಂದಿದ್ದೇನೆ. ಹಸಿರಿನಿಂದ ಕಂಗೊಳಿಸುವ ಅದು ನನ್ನ ಪ್ರಿಯವಾದ ತಾಣ. ನನ್ನ ಸ್ವಾತ್ ಕಣಿಯೂ ಸೌಂದರ್ಯದಲ್ಲಿ ಕಡಿಮೆಯೇನಿಲ್ಲ. ಆದರೆ ಅಲ್ಲಿ ಶಾಂತತೆಯಿಲ್ಲ. ಬುನೈರಿನಲ್ಲಿ ಶಾಂತಿಯಿದೆ, ನೆಮ್ಮದಿಯಿದೆ. ಗುಂಡಿನ ಸದ್ದು ಕೇಳಿಸುವುದಿಲ್ಲ. ಯಾವ ಭಯವೂ ಇಲ್ಲ. ನಾವು ಸಂತಸದಿಂದಿದ್ದೇವೆ. ಅಲ್ಲಿ ಹಲವಾರು ಅಂಗಡಿಗಳಿದ್ದವು. ನಾನು ಏನನ್ನೂ ಖರೀದಿಸಲಿಲ್ಲ. ಅಮ್ಮ ಕಿವಿಯೋಲೆ ಮತ್ತು ಬಳೆ ಖರೀದಿಸಿದರು.
ಜನವರಿ 9 ಶುಕ್ರವಾರ, ತಲೆಬರಹ: ಮೌಲಾನಾ ರಜೆ ಹಾಕಿದ್ದೀರಾ?
ಇವತ್ತು ಶಾಲೆಯಲ್ಲಿ ನಾನು ನನ್ನ ಬುನೈರ್ ಪಿಕ್‍ನಿಕ್‍ನ ಬಗ್ಗೆ ಗೆಳತಿಯರಲ್ಲಿ ಮಾತನಾಡಿದೆ. ಅವರು ಅದಕ್ಕೆ ಗಮನ ಕೊಡಲಿಲ್ಲ. ಅಲ್ಲಿನ ಕಥೆ ಕೇಳಿ ಕೇಳಿ ಸಾಕಾಯಿತು ಎಂದರು. ಎಫ್.ಎಮ್. ರೇಡಿಯೋದಲ್ಲಿ ಭಾಷಣ ಮಾಡುತ್ತಿದ್ದ ಮೌಲಾನಾ ಶಾಹ್ ದುರಾನ್‍ರ ಮರಣದ ಬಗ್ಗೆ ಹರಡಿದ್ದ ವದಂತಿಗಳ ಬಗ್ಗೆ ಮಾತನಾಡಿದೆವು. ಹೆಣ್ಮಕ್ಕಳು ಶಾಲೆಗೆ ಹೋಗಬಾರದೆಂದು ಘೋಷಿಸಿದ್ದು ಇದೇ ಮೌಲಾನಾ. ಅವರು ರಜೆಯ ಮೇರೆಗೆ ಊರಿಗೆ ಹೋಗಿದ್ದಾರೆ ಎಂದು ಓರ್ವಳು ತಿಳಿಸಿದಳು.
ಜನವರಿ 14 ಬುಧವಾರ, ತಲೆಬರಹ ಮತ್ತೆ ಶಾಲೆಗೆ ಹೋಗುವುದು ಅನುಮಾನ.
ಇಂದು ಶಾಲೆಗೆ ಹೋಗುವಾಗ ಮನಸ್ಸು ತಳಮಳಗೊಂಡಿತ್ತು. ನಾಳೆಯಿಂದ ಚಳಿಗಾಲದ ರಜೆ ಪ್ರಾರಂಭವಾಗುತ್ತದೆ. ಪ್ರಿನ್ಸಿಪಾಲರು ರಜೆ ಆರಂಭಗೊಳ್ಳುವುದರ ಬಗ್ಗೆ ಹೇಳಿದ್ದಾರೆ. ಆದರೆ ಯಾವಾಗ ಪುನರಾರಂಭವಾಗುತ್ತದೆ ಎಂಬ ಬಗ್ಗೆ ಏನೂ ಹೇಳಿಲ್ಲ. ನನ್ನ ಅಂದಾಜಿನ ಪ್ರಕಾರ ಜನವರಿ 15 ರಿಂದ ಹುಡುಗಿಯರ ಶಿಕ್ಷಣವನ್ನು ತಾಲಿಬಾನ್ ನಿಷೇಧಿಸಿರುವುದೇ ಪ್ರಿನ್ಸಿಪಾಲರ ಈ ಮೌನಕ್ಕೆ ಕಾರಣವಾಗಿರಬಹುದು.
ಈ ಬಾರಿ ನಮಗಾರಿಗೂ ರಜೆಯ ಬಗ್ಗೆ ಸಂತಸವಾಗಲಿಲ್ಲ. ತಾಲಿಬಾನ್ ಆದೇಶ ಜಾರಿಗೆ ಬಂದರೆ ಮತ್ತೆ ನಮಗೆ ಶಾಲೆಯ ಮೆಟ್ಟಿಲು ಹತ್ತುವಂತಿಲ್ಲ. ಅದೇ ಬೇಸರ ಎಲ್ಲರಿಗೂ ಕಾಡುತ್ತಿತ್ತು. ಕೆಲವು ಹುಡುಗಿಯರು ಸ್ವಾತ್ ಪ್ರದೇಶದಿಂದ ಬೇರೆಡೆಗೆ ಹೋಗುವುದಾಗಿ ತಿಳಿಸಿದರು. ಕೊನೆಯ ದಿನವಾದ ಕಾರಣ ಎಂದಿಗಿಂತ ಹೆಚ್ಚು ಸಮಯ ಮೈದಾನದಲ್ಲಿ ಆಟ ವಾಡಿದೆವು. ಶಾಲೆ ಮತ್ತೆ ಆರಂಭವಾಗುತ್ತದೆಂದು ನನ್ನ ನಂಬಿಕೆಯಾಗಿತ್ತು. ಆದರೂ ಶಾಲೆಯಿಂದ ಮರಳುವಾಗ ಇನ್ನೆಂದೂ ಇಲ್ಲಿಗೆ ಬರಲಾರನೆಂಬ ಭಾವನೆಯಿಂದ ಕಟ್ಟ ಕಡೆಗೆ ನಮ್ಮ ಶಾಲೆಯ ಕಡೆಗೊಮ್ಮೆ ನೋಟ ಬೀರಿದೆ.
ಇವೆಲ್ಲವೂ ಆ ಪುಟ್ಟ ಹುಡುಗಿಯ ಮನಸ್ಸಿನಲ್ಲಿ ಉದಯಿಸಿದ ತೀಕ್ಷ್ಣ ಭಾವನೆಗಳು. ಸ್ವಾತ್ ಕಣಿವೆಯಲ್ಲಿ ತಾಲಿಬಾನಿಗಳ ಪ್ರಭುತ್ವ ತಾರಕಕ್ಕೇರಿದ ಸಂದರ್ಭದಲ್ಲಿ ಮಲಾಲಳ ಡೈರಿಯ ಈ ಸಾಲುಗಳನ್ನು ಬಿಬಿಸಿಯ ಉರ್ದು ವಿಭಾಗವು ಪ್ರಕಟಿಸಲು ಒಲವು ತೋರಿತು. ಅವಳ ತಂದೆ ಓರ್ವ ಅಧ್ಯಾಪಕರಾಗಿದ್ದರು. ಅವರು ಮಗಳ ಬೆಂಬಲಕ್ಕೆ ನಿಂತರು. ಮಲಾಲಳ ಸ್ವಂತ ಹೆಸರಿನಲ್ಲಿ ಅದನ್ನು ಪ್ರಕಟಿಸುವಂತಿರಲಿಲ್ಲ. ಹಾಗೇನಾದರೂ ಪ್ರಕಟಿಸಿದರೆ ಅವಳ ಜೀವಕ್ಕೇ ಕುತ್ತು. ಆದ್ದರಿಂದ ‘ಗುಲ್ ಮಕಾಯಿ’ ಎಂಬ ಕಾವ್ಯನಾಮದೊಂದಿಗೆ ಪ್ರಕಟವಾಯಿತು. ಇದರೊಂದಿಗೆ ತಾಲಿಬಾನಿಗಳ ಕುರಿತು ಜಗತ್ತು ತಿಳಿಯಿತು. ತಾಲಿಬಾನಿಗಳಿಗೆ ಅಜ್ಞಾತ ಬರಹಗಾರ್ತಿ ನುಂಗಲಾರದ ತುತ್ತಾದಳು. ಅವಳ ತಂದೆ ಹೇಳುತ್ತಿದ್ದರಂತೆ. “ಕೆಲವು ದಿನಗಳ ಹಿಂದೆ ಡೈರಿಯ ಪ್ರಿಂಟ್ ಔಟನ್ನು ಯಾರೋ ಒಬ್ಬರು ತೆಗೆದುಕೊಂಡು ಬಂದು ಎಷ್ಟು ಸುಂದರವಾಗಿ ಬರೆದಿದ್ದಾಳಲ್ವ ಎಂದು ಹೊಗಳುತ್ತಿದ್ದರಂತೆ. ಅದು ಬರೆದಿರುವುದು ನನ್ನ ಮಗಳು ಎಂದು ಹೇಳಿಕೊಳ್ಳಲಾರದೆ ತಂದೆ ಮುಗುಳ್ನಗೆ ಬೀರಿ ಸುಮ್ಮನಾದರಂತೆ.”
ತಾಲಿಬಾನಿಗಳ ಹಿಡಿತದಲ್ಲಿದ್ದ ಸ್ವಾತ್ ಕಣಿವೆಯು “ಫ್ಲಶ್ ಔಟ್ ತಾಲಿಬಾನ್” ಎಂಬ ಯೋಜನೆಯಿಂದಾಗಿ ಸರಕಾರದ ಸ್ವಾಧೀನಕ್ಕೆ ಬಂತು. ಆಗ “ಗುಲ್ ಮಕಾಯ್” ಎಂಬ ಹೆಸರಿನೊಂದಿಗೆ ತೆರೆಯ ಹಿಂದೆ ನಿಂತು ಬರೆಯುತ್ತಿದ್ದವಳು ಮಲಾಲ ಆಗಿ ಸಮಾಜದ ಮುಂದೆ ಬಂದಳು. ಇದನ್ನು ಕಂಡು ಜಗತ್ತು ಬೆರಗುಗಣ್ಣಿನಿಂದ ನೋಡಿತು. 13ರ ಪೋರಿಯ ಈ ಸಾಧನೆಗೆ, ಸ್ಥೈರ್ಯಕ್ಕೆ ತಲೆದೂಗಿತು. ಇದರಿಂದಾಗಿ ಹಲವಾರು ಪ್ರಶಸ್ತಿಗಳು ಅವಳನ್ನು ಅರಿಸಿ ಬಂದುವು.
ಮಲಾಲಾ ಈಗ ದೇಶಾದ್ಯಂತ ಪ್ರಸಿದ್ದಿ ಪಡೆದಳು. ಆಕೆ ಮಹಿಳೆಯರ ಶಿಕ್ಷಣದ ಕುರಿತು ಮಾತನಾಡಿದಳು. ಇಸ್ಲಾಮ್ ಮಹಿಳೆಯರಿಗೆ ನೀಡುವ ಸ್ಥಾನಮಾನದ ಕುರಿತು ವಿವರಿಸಿದಳು. ಇಸ್ಲಾಮಿನ ಕುರಿತ ತಾಲಿಬಾನಿಗಳ ವ್ಯಾಖ್ಯೆಯನ್ನು ವಿರೋಧಿಸಿದಳು. ರಾಜಕಾರಣಿಗಳಿಗೆ ನಿಸ್ವಾರ್ಥ ಸೇವೆ ಮಾಡಲು ಸಾಧ್ಯವಿಲ್ಲದಿದ್ದರೆ ನಾನೇ ರಾಜಕೀಯಕ್ಕಿಳಿಯುತ್ತೇನೆ ಎಂದು ಸವಾಲು ಹಾಕಿದಳು. ಇಷ್ಟೆಲ್ಲ ಮಾತನಾಡುವಾಗ ಮಲಾಲಗಳಿಗೆ ಕೇವಲ 14 ವರ್ಷ. 
ಧಾರವಾಹಿ ನೋಡಿಯೋ ಗೇಮ್ಸ್ ಆಡಿಯೋ ಕಾಲಹರಣ ಮಾಡುವ ಈ ವಯಸ್ಸಿನಲ್ಲಿ ಮಲಾಲ ಸುಂದರ ರಾಷ್ಟ್ರದ ಕನಸು ಕಂಡಳು. “ನನ್ನ ಕನಸಿನ ಪ್ರಕಾರ ಪಾಕಿಸ್ತಾನದಲ್ಲಿ ಸದಾ ಶಾಂತಿ ನೆಲೆಸಿರಬೇಕು. ನೆರೆ ರಾಷ್ಟ್ರದೊಂದಿಗೆ ಸೌಹಾರ್ದತೆ ಇರಬೇಕು. ನನ್ನ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ, ಹಗರಣಗಳಿರಬಾರದು. ಅದು ಅಜಾತ ಶತ್ರು ರಾಷ್ಟ್ರವಾಗಿರಬೇಕು.” ಇವು ಮಲಾಲಳ ಮನದಾಳದ ಇಂಗಿತವಾಗಿತ್ತು. ಇಂದು ಎಲ್ಲಾ ಪ್ರಾಯದವರಿಗೂ ಅವಳ ಧೈರ್ಯ, ಸ್ಥೈರ್ಯ, ಛಲದಲ್ಲಿ ಮಾದರಿಯಿದೆ. ಸತ್ಯ ಹೇಳುವವರಿಗೆ ಈ ಜಗತ್ತಿನಲ್ಲಿ ಕ್ರೌರ್ಯವೇ ಪ್ರತಿಫಲವಾಗಿ ದೊರೆಯುತ್ತದೆ. ಮಲಾಲಳ ಸ್ಥಿತಿಯೂ ಅಂತೆಯೇ ಆಗಿದೆ. ಹಾಗಂತ ಸತ್ಯವನ್ನು ಅಡಗಿಸಿಡಬೇಕು ಅಂತಲ್ಲ. ತಡವಾಗಿಯಾದರೂ ಸತ್ಯಕ್ಕೆ ಗೆಲುವು ಲಭಿಸಿಯೇ ತೀರುವುದು. ನೂರು ದಿನ ಇಲಿಯಾಗಿ ಬಾಳುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ನಮ್ಮ ಜನ್ಮಕ್ಕೆ ನೀಡುವ ಗೌರವವಲ್ಲವೇ?

Wednesday 26 September 2012

ಪುರುಷರೇ ಹೀಗೆ?


ನಾನು ಸಂಜೆ ಮೆಲ್ಲನೆ ಮನೆ ತಲುಪಿದೆ. ಇವತ್ತು ನನ್ನವಳನ್ನು ಸ್ವಲ್ಪ ಹೆದರಿಸುವ ಒಂದು ತುಂಟ ಆಲೋಚನೆ ಮನಸ್ಸಿನಲ್ಲಿ ಮೊಳಕೆಯೊಡೆಯಿತು.
ಹಾಗೆ ನಾನು ಕಾಲಿಂಗ್ ಬೆಲ್ ಅದುಮಿ ಓಡಿ ಹೋಗಿ ಅಂಗಳದ ಮೂಲೆಯಲ್ಲಿದ್ದ ಮಲ್ಲಿಗೆ ಬಳ್ಳಿಯ ಮರೆಯಲ್ಲಿ ಅಡಗಿ ಕುಳಿತು ಬಾಗಿಲಿನ ಕಡೆಗೆ ನೋಡತೊಡಗಿದೆ. ಯಾವುದೇ ಪ್ರತಿಕ್ರಿಯೆ ಇಲ್ಲ.
ಸ್ವಲ್ಪ ಹೊತ್ತಾದ ಮೇಲೆ 'ಕಿರ್ರೀ' ಎಂದು ಶಬ್ದ ಮಾಡುತ್ತಾ ಬಾಗಿಲು ತೆರೆದುಕೊಂಡಿತು. ಹಿಂದೆಯೇ ನನ್ನ ಶ್ರೀಮತಿಯವರು ನಿದ್ದೆಯಿಂದ ಎದ್ದು ಬಂದವಳಂತಿದ್ದಳು.
ನಾನು ಅವಳನ್ನು ಮದುವೆಯಾದ ದಿನದಂದೇ ನನಗೆ ಒಂದು ಸಂಶಯ ಬಂದಿದೆ. ಇವಳಿಗೂ ಕುಂಭಕರ್ಣನ ಸಂತತಿಗೂ ಯಾವುದಾದರೂ ಲಿಂಕ್ ಇರಬಹುದೇ ಎಂದು.
ಹೊರಬಂದ ಅವಳು ಆಚೆ ಈಚೆ ನೋಡಿ ಕನಸು ಕಂಡವಳಂತೆ ಒಳನಡೆದಳು. ನಾನು ಎದ್ದು ಬಂದು ಮತ್ತೊಮ್ಮೆ ಬೆಲ್ಲನ್ನು ಅದುಮಿ ಬಾಗಿಲಿಗೆ ಬೆನ್ನು ಹಾಕಿ ನಿಂತೆ.
ಸ್ವಲ್ಪ ಕಳೆದ ನಂತರ ಬಾಗಿಲು ತೆರೆದುಕೊಂಡಿತು. ನನ್ನವಳು ನನ್ನನ್ನು ಪ್ರೀತಿಯಿಂದ ಸ್ವಾಗತಿಸಬಹುದೆಂದು ಭಾವಿಸಿದೆ. ಆದರೆ ನಡೆದದ್ದು ಬೇರೆಯೇ. ಬೆನ್ನಿಗೆ ಎರಡು ಗುದ್ದು ಬಿತ್ತು. ಹಿಂದೆಯೇ ಸಾಲು ಪಟಾಕಿ ಸಿಡಿಸಿದ ಹಾಗೆ ಬೈಗುಳ.
"ಏನ್ರೀ ಕಳ್ಳರ ಹಾಗೆ ಬಂದು ಕಾಲಿಂಗ್ ಬೆಲ್ ಅದುಮಿದ್ದು" ನಾನು ನನ್ನ ಮೇಲಿನ ಆರೋಪವನ್ನು ಸರಿಪಡಿಸಿದೆ.
'ನಿಮ್ಮ ಕರ್ಮ' ಎಂದು ಗೊಣಗುತ್ತಾ ಒಳಹೋದಳು.
ನಮ್ಮ ಈ ಬೀದಿ ಕಾಳಗವನ್ನು ಯಾರಾದರೂ ನೋಡಿದರೋ ಎಂದು ನಾನು ಸುತ್ತ ಮುತ್ತ ಕಣ್ಣು ಹಾಯಿಸಿದೆ. ಆಗ ಎದುರು ಮನೆಯ ಸಾವಿತ್ರಿಯಕ್ಕ ನೋಡಿಯೂ, ನೋಡದಂತೆ ತೆಂಗಿನ ಮರವನ್ನು ದಿಟ್ಟಿಸುತ್ತಿದ್ದರು.
ನಾನು ಬೇಗನೇ ಒಳಹೊಕ್ಕೆ. ನಾನು ಕಳ್ಳರಂತೆ ಹೋಗಲು ಕಾರಣವಿತ್ತು. ಬೆಳಿಗ್ಗೆ ಹೋಗುವಾಗ ಟೀವಿ ಮೇಲೆ ಇಟ್ಟಿದ್ದ ಫ್ಲವರ್ ವಾಝನ್ನು ಒಡೆದು ಹಾಕಿ ಹೋಗಿದ್ದೆ. ಅದು ನನ್ನಿಂದ ಆಕಸ್ಮಿಕವಾಗಿ ಸಂಭವಿಸಿದರೂ ನನ್ನವಳ ದೃಷ್ಟಿಯಲ್ಲಿ ಅಕ್ಷಮ್ಯ  ಅಪರಾಧವಾಗಿತ್ತು.
ಆ ವಾಝ್ ಅವಳ ಅಣ್ಣ ದುಬೈಯಿಂದ ಕಳಿಸಿದ್ದಾಗಿತ್ತು. ನನ್ನಲ್ಲಿ ಹಲವಾರು ಬಾರಿ ಹೇಳಿದ್ದಳು, ಅಲಂಕಾರಕ್ಕೆ ಒಂದು ವಾಝ್ ತರಬೇಕೆಂದು ಆದರೆ ನಾನು ಕ್ಯಾರೇ ಮಾಡಲಿಲ್ಲ. ಅಂತಹ ವಾಝನ್ನು ಒಡೆದು ಹಾಕಿದಾಗ ನನ್ನವಳಿಗೆ ಮಾತ್ರವಲ್ಲ ಎಂಥ ವಳಿಗೂ ಕೋಪ ಬರಬಹುದು.
ನಾನು ಅಪರಾಧಿ ಭಾವನೆಯಿಂದ ಮೆಲ್ಲನೆ ಅಡುಗೆ ಮನೆಗೆ ಹೋದೆ. ನನ್ನ ಮೇಲಿದ್ದ ಕೋಪ ಅಲ್ಲಿನ ಪಾತ್ರೆಗಳು ಅನುಭವಿಸುತ್ತಿದ್ದವು. ಒಂದೊಂದು ಪಾತ್ರೆಯೂ ವ್ಯತ್ಯಸ್ಥ ರೂಪ ತಾಳಿದ್ದವು. ಇನ್ನು ಕೊಡಪಾನದ ಅವಸ್ಥೆ ಹೇಳತೀರದು. ಉಪ್ಪಲ್ಲಿ ಹಾಕಿದ ಮಿಡಿ ಮಾವಿನ ಕಾಯಿಯಂತಾಗಿತ್ತು.
ನನ್ನ ಮಗ ಆದಿಲ್ ನಿದ್ರಿಸುತ್ತಿದ್ದುದರಿಂದ ಬಚಾವಾದ. ಇಲ್ಲದಿದ್ದರೆ ಅವಳ ಕೋಪದ ಪ್ರಭಾವ ಅವನ ಮೇಲೆರಗುತ್ತಿತ್ತು. ನನ್ನ ಮೇಲಿದ್ದ ಕೋಪವನ್ನು ಇತರರ ಮೇಲೆ ಪ್ರಯೋಗಿಸುವುದು ಅವಳ ವಾಡಿಕೆ.
"ಏನು ಶ್ರೀಮತಿಯವರೇ ತುಂಬಾ ಗರಂ ಆದಂತೆ ಕಾಣುತ್ತೀರಾ" ನಾನು ಮೆಲ್ಲನೆ ಕೆಣಕಿದೆ.
ಆಗ ನನ್ನೊಂದಿಗೆ ಮೌನವ್ರತ ಆಚರಿಸಿಯಾಗಿತ್ತು. ಯಾವುದೇ ಪ್ರತಿಕ್ರಿಯೆ ಇಲ್ಲ. ಮುಖ ಗಂಟಿಕ್ಕಿತ್ತು.
ನನ್ನವಳಲ್ಲಿದ್ದ ಪ್ಲಸ್ ಪಾಯಿಂಟ್ ಏನೆಂದರೆ ಕೋಪ ಬಂದಾಗ ಮೌನವ್ರತ ಆಚರಿಸುವುದು. ಬಹುಶಃ ಲೋಕದಲ್ಲಿ ಇವಳು ಮೊದಲು ಸೃಷ್ಟಿಯಾಗಿರಬಹುದು.
ನನಗೆ ದಾಂಪತ್ಯ ಜೀವನವು ಬೇಸತ್ತು ಹೋಗಿತ್ತು. ದಿನ ನಿತ್ಯ ಸಣ್ಣಪುಟ್ಟ ವಿಷಯಗಳಿಗೆ ಗಲಾಟೆ. ಹೇಗೂ ನೀರಿಗಿಳಿದಾಗಿದೆ. ಇನ್ನು ಚಳಿಗೆ ಯಾಕೆ ಹೆದರುವುದು. ಆದರೆ ಎಷ್ಟೇ ಗಲಾಟೆ ಮಾಡಿದರೂ ಅವಳ ಮನಸ್ಸಿನ ಮೂಲೆಯಲ್ಲಿ ನನ್ನೊಂದಿಗೆ ಗಾಢವಾದ ಪ್ರೀತಿಯಿದೆ.
ನಾನು ಬಂದು ಟೇಬಲಿನ ಮುಂದೆ ಕುಳಿತೆ. ಸ್ವಲ್ಪ ಹೊತ್ತಾದ ಮೇಲೆ 'ಇಕೊಳ್ಳಿ ಚಾ' ಎಂದು ಟೇಬಲಿನ ಮೇಲೆ ಕುಕ್ಕಿ ಒಂದು ಮೂಲೆಯಲ್ಲಿ ಹೋಗಿ ಕುಳಿತಳು. ಚಹಾ ಅಕ್ಕಿ ತೊಳೆದ ನೀರಿನಂತಿತ್ತು.
ಚಹಾ ಕುಡಿದು ಅವಳನ್ನು ಮಾತಿಗೆಳೆಯಲು ಪ್ರಯತ್ನಿಸಿದೆ.
"ಅಲ್ಲ ಕಣೇ, ಯಾಕೆ ಇಷ್ಟು ಕೋಪ" ಮೆಲ್ಲನೆ ಕೇಳಿದೆ. ಮದವೇರಿದ ಆನೆಯನ್ನು ಮನವೊಲಿಸುವಂತಾಗಿತ್ತು ನನ್ನ ಅವಸ್ಥೆ.
"ಏನ್ರೀ ಒಂದು ವಾಝ್ ತರಲು ಹೇಳಿದಾಗ ನಿಮಗೆ ತರಲಾಗಲಿಲ್ಲ. ಈಗ ನನ್ನ ಅಣ್ಣ ತಂದದ್ದನ್ನು ಮುರಿದು ಹಾಕಿದ್ದೀರಲ್ಲ. ನಾನು ಏನಾದರೂ ತರಲು ಹೇಳಿದಾಗ ನಿಮಗೆ ದುಂದುವೆಚ್ಚ. ನೀವು ಅನಾವಶ್ಯಕವಾಗಿ ಏನು ಬೇಕಾದರೂ ಖರೀದಿಸಬಹುದು." ಕೋಪ ಇಳಿಯುವ ಲಕ್ಷಣ  ಕಾಣಿಸಿತು.
"ಸಾರಿ ಕಣೇ. ಅದು ಆಕಸ್ಮಿಕವಾಗಿ ಮುರಿದದ್ದು. ನಾನು ಬೇಕೂಂತಲೇ ಮುರಿದದ್ದಲ್ಲ."
"ತಪ್ಪು ಮಾಡಿ 'ಸಾರಿ' ಹೇಳಿದರೆ ಮುಗಿಯಿತು. ಪುರುಷ ಸಂತಾನವೇ ಹೀಗೆ. ಒಂದು ತಪ್ಪಿತಸ್ಥ ಭಾವನೆಯೇ ಇಲ್ಲ."
ಅವಳು ನನ್ನ ಸವಿೂಪ ಬಂದು ಕುಳಿತಳು. ಕೋಪ ಅರ್ಧ ಇಳಿದಿತ್ತು.
"ನೀನು ನನ್ನ ತಪ್ಪನ್ನು ಪುರುಷ ಜಾತಿಯ ಮೇಲೆ ಹೊರಿಸುವುದು ಸರಿಯಲ್ಲ." ನಾನು ಪುರುಷರ ಪ್ರತಿನಿಧಿಯಂತೆ ವಾದಿಸಿದೆ.
"ಪುರುಷರಂತೆ! ಪುರುಷರು ಕರುಣೆ ಇಲ್ಲದವರು."
"ಆಯಿತು ಕಣೇ. ಪುರುಷರು ಕರುಣೆ ಇಲ್ಲದವರು. ಸ್ತ್ರೀಯರು ಕರುಣಾಮೂರ್ತಿಗಳು" ನಾನು ಅವಳ ವಾದವನ್ನು ಸಮ್ಮತಿಸಿದೆ.
"ಹಾಗೆ ದಾರಿಗೆ ಬನ್ನಿ."
"ಆಯಿತು ಕಣೇ. ಇನ್ನು ರಂಪಾಟ ಸಾಕು."
"ಇದ್ದದ್ದನ್ನು ಹೇಳಿದರೆ ನಿಮಗೆ ಆಗುವುದಿಲ್ಲ" ಎಂದು ಗೊಣಗುತ್ತಾ ಎದ್ದು ಅಡುಗೆ ಕೋಣೆಗೆ ಹೋದಳು.
ಸ್ವಲ್ಪ ಹೊತ್ತಾದ ಮೇಲೆ ನಾನು ಅಡುಗೆ ಕೋಣೆಗೆ ಹೋದೆ. ಅವಳು ಪಾತ್ರೆ ತೊಳೆಯುತ್ತಿದ್ದಳು. ಮುಖ ಕುಂಬಳಕಾಯಿಯಂತಿತ್ತು.
ನಾನು ಹೇಳಿದೆ, "ಸಾರಿ ಕಣೇ ನಾನು ಬೇಕೂಂತಲೇ ಮುರಿದು ಹಾಕಿದ್ದಲ್ಲ. ನೀನು ಏನೂ ಹೆದರಬೇಡ. ಬೇಗ ಹೊರಟು ನಿಲ್ಲು. ಇವತ್ತು ಶಾಪಿಂಗ್‍ಗೆ ಹೋಗುವಾ. ಅಲ್ಲಿಂದ ನೀನು ಬೇಕಾದದ್ದನ್ನು ಖರೀದಿಸಿಕೋ."
ಆಗ ಅವಳ ಸಂತೋಷಕ್ಕೆ ಪಾರವೇ ಇಲ್ಲ.
"ನನಗೆ ಗೊತ್ತಿತ್ತು ನೀವು ಒಳ್ಳೆಯವರು ಎಂದು. ನಿಮಗೆ ಸ್ತ್ರೀಯರ ನೋವನ್ನು ಅರ್ಥಮಾಡಿಕೊಳ್ಳುವಷ್ಟು ಕರುಣೆ ಇದೆ."
ನನಗೆ ಒಂದು ಸಂಶಯ ಬಂತು. ನಾನು ಗಂಡೋ ಹೆಣ್ಣೋ? ಕಾರಣ, ಅವಳು ಹೇಳಿದ್ದಳು, ಪುರುಷರು ಕರುಣೆ ಇಲ್ಲದ ಜಾತಿಗಳು ಎಂದು.
ನಾನು ಬಂದು ಮತ್ತೆ ಪೇಪರು ಓದಲು ಕುಳಿತೆ.
ಬೇಗ ಬೇಗನೇ ಕೆಲಸ ಮುಗಿಸತೊಡಗಿದಳು. ಅವಳಲ್ಲಿ ಯಾವುದೋ ಹಬ್ಬದ ಸಂಭ್ರಮವಿತ್ತು. ಅದಕ್ಕೆ ಕಾರಣವೂ ಇತ್ತು. ನಮ್ಮ ನಾಲ್ಕು ವರ್ಷದ ಸಮರ ಮಿಶ್ರಿತ ಸುಖ ದಾಂಪತ್ಯ ಜೀವನದಲ್ಲಿ ಅವಳನ್ನು ಶಾಪಿಂಗ್‍ಗೆ ಕರೆದುಕೊಂಡು ಹೋಗುವುದು ಇದು ಮೊದಲ ಬಾರಿಯಾಗಿತ್ತು. ಯಾವುದಾದರೂ ಸಭೆ ಸಮಾರಂಭಗಳಿಗೆ ಹೋದರೆ ಒಂದು ಬಸ್ಸಲ್ಲಿ ಹೋಗಿ ಇನ್ನೊಂದು ಬಸ್ಸಲ್ಲಿ ಬರುತ್ತಿದ್ದೆವು.
ಅವಳು ಕೆಲಸ ಮುಗಿಸಿ ನನ್ನ ಸಮೀಪ ಬಂದು ಕುಳಿತು ನನ್ನ ಗುಣಗಾನ ಮಾಡಲು ಪ್ರಾರಂಭಿಸಿದಳು. ಕರಿ ಮೋಡಗಳೆಲ್ಲಾ ಮಾಯವಾಗಿ ಶುಭ್ರ ನೀಲಾಕಾಶದಂತಿತ್ತು ಅವಳ ಮುಖ. "ನೀವು ತುಂಬಾ ಒಳ್ಳೆಯವರು. ನಾನು ನಿಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಸಾರಿ ಆಯ್ತಾ? ಕ್ಷಮಿಸ್ತೀರಿ ತಾನೇ?
ತುಂಟ ನಗು ಬೀರುತ್ತಾ ತನ್ನ ತಲೆಯನ್ನು ನನ್ನ ಹೆಗಲ ಮೇಲಿಟ್ಟಳು. ಆಗಲೇ ಮಗ ಆದಿಲ್ ನಿದ್ದೆಯಿಂದ ಎದ್ದು ಅಳಲು ಪ್ರಾರಂಭಿಸಿದನು.

Thursday 16 August 2012

ವಿವಾಹ ವಿಚ್ಛೇದನ


 ಆ ರಾತ್ರಿ ನಾನು ಮನೆಗೆ ತಲುಪಿದಾಗ ನನ್ನ ಪತ್ನಿ ಊಟ ಬಡಿಸಿದಳು. ಆಗ ನಾನು ಅವಳ ಕೈ ಹಿಡಿಯುತ್ತಾ ಹೇಳಿದೆ. “ನಿನ್ನಲ್ಲಿ ನನಗೆ ಒಂದು ವಿಚಾರ ಹೇಳಲಿಕ್ಕಿದೆ.” ಅವಳು ನನ್ನ ಬಳಿ ಕುಳಿತುಕೊಂಡಳು. ನಾನು ಅವಳ ಕಣ್ಣುಗಳನ್ನು ದಿಟ್ಟಿಸಿದೆ. ಹೊಳಸಿತ್ತು ನನ್ನ ಬಾಯಿಯಿಂದ ಮಾತೇ ಹೊರಡಲಿಲ್ಲ. ಆದರೂ ನನ್ನ ಮನದಿಂಗಿತವನ್ನು ಅವಳಿಗೆ ತಿಳಿಸಲೇ ಬೇಕಾಗಿತ್ತು. ನನಗೆ ಅವಳಿಂದ ವಿಚ್ಛೇದನ ಬೇಕಾಗಿತ್ತು. ನಾನು ಮೆಲ್ಲನೆ ನನ್ನ ಕೋರಿಕೆಯನ್ನು ಅವಳ ಮುಂದಿಟ್ಟೆ. ಆದರೆ ಅವಳು `ಯಾಕೆ’ ಎಂಬ ಪ್ರಶ್ನೆಯನ್ನು ಕೇಳಿದಳೇ ಹೊರತು ಅವಳಲ್ಲಿ ಬೇರಾವುದೇ ಪ್ರಭಾವವನ್ನು ನಾನು ಕಾಣಲಿಲ್ಲ. ನಾನು ಅವಳ `ಯಾಕೆ’ ಎಂಬ ಪ್ರಶ್ನೆಯನ್ನು ಕಡೆಗಣಿಸಿದೆ. ಇದು ಅವಳಿಗೆ ಕೋಪ ಬರಿಸಿತು. ತನ್ನ ಕೈಯಲ್ಲಿದ್ದ ಸ್ಪೂನೊಂದನ್ನು ನನ್ನತ್ತ ಎಸೆದು ಚೀರಿಕೊಂಡಳು. “ನೀವು ಮನುಷ್ಯರಲ್ಲ” ಆ ರಾತ್ರಿ ನಾವು ಪರಸ್ಪರ ಮಾತೇ ಆಡಲಿಲ್ಲ.
ಅವಳು ಕಣ್ಣೀರು ಸುರಿಸುತ್ತಿದ್ದಳು. ನಮ್ಮ ದಾಂಪತ್ಯ ಬದುಕಿನಲ್ಲಿ ಏನಾದರೂ ಏಡವಟ್ಟಾಗಿದೆಯೇ ಎಂದು ಮೆಲುಕು ಹಾಕುತ್ತಿದ್ದಳು. ನಾನು ಅವಳಿಗೆ ತೀಕ್ಷ್ಣ ಉತ್ತರವನ್ನು ನೀಡಿದೆ. “ನಿನಗೆ ನನ್ನ ಹೃದಯದಲ್ಲಿ ಜಾಗವಿಲ್ಲ. ಅದನ್ನು ನಾನು ನನ್ನ ಪ್ರೇಯಸಿಗೆ ನೀಡಿದ್ದೇನೆ. ನಾನು ನಿನ್ನನ್ನು ಹೆಚ್ಚೇನೂ ಪ್ರೀತಿಸಿರಲಿಲ್ಲ” ಅತ್ಯಂತ ಆಘಾತಕಾರೀ ಉತ್ತರ!
ಕೊನೆಗೆ ನಾನು ಅವಳಿಗೆ ನಮ್ಮ ಮನೆ, ನನ್ನ ಕಾರು ಮತ್ತು ನನ್ನ ಕಂಪೆನಿಯ 30 ಶೇಕಡಾ ಮಾಲಕತ್ವವನ್ನು ವಿಚ್ಛೇದನ ಪತ್ರದೊಂದಿಗೆ ನೀಡಿದೆ. ಅವಳು ಅದರ ಕಡೆಗೊಮ್ಮೆ ನೋಟ ಬೀರಿ ಅದನ್ನು ಹರಿದು ಚಿಂದಿ ಮಾಡಿದಳು.
ಹತ್ತು ವರ್ಷಗಳಿಗಿಂತಲೂ ಹೆಚ್ಚು ನನ್ನೊಂದಿಗೆ ಜೀವನ ನಡೆಸಿದ ಅವಳು ಈಗ ಅಪರಿಚತೆಯಾದಳು. ಅವಳ ವ್ಯರ್ಥವಾದ ಸಮಯ, ಸಂಪತ್ತು ಮತ್ತು ಎನರ್ಜಿಯ ಕುರಿತು ನನಗೆ ಅಪರಾಧಿ ಮನೋಭಾವ ಮಾಡಿತು. ಅವಳು ನನ್ನ ಮುಂದೆ ನಿಂತು ರೋಧಿಸ ತೊಡಗಿದಳು. ಅವಳ ಆ ಅಳು ನನಗೊಂದು ಮುಕ್ತಿಯಂತೆ ತೋರಿತು. ನನ್ನ ಬಹುದಿನಗಳ ಆಕಾಂಕ್ಷೆಯು ನೆರವೇರುತ್ತದೆಂದು ಸಂತಸಪಟ್ಟೆ.
ಮರುದಿನ ನಾನು ಮನೆಗೆ ಬಹಳ ತಡವಾಗಿ ಹೋದೆ. ಟೇಬಲಿನ ಮುಂದೆ ಕುಳಿತು ಅವಳು ಏನೋ ಬರೆಯುತ್ತಿದ್ದಳು. ಅಲ್ಲಿ ಎಂದಿನಂತೆ ನನಗೆ ಊಟ ಬಡಿಸಿಟ್ಟಿರಲಿಲ್ಲ. ನಾನು ನೇರವಾಗಿ ಬೇಡ್ ರೂಮಿಗೆ ಹೋಗಿ ಮಲಗಿದೆ. ಆ ದಿನವನ್ನು ನನ್ನ ಪ್ರೇಯಸಿಯೊಂದಿಗೆ ಕಳೆದಿದ್ದರಿಂದ ಆಯಾಸವಾಗಿತ್ತು. ಬಹಳ ಬೇಗನೇ ನಿದ್ದೆ ಹತ್ತಿತು. ನನಗೆ ಬೆಳಿಗ್ಗೆ ಎಚ್ಚರವಾದಾಗ ಅವಳು ಬರೆಯುತ್ತಲೇ ಇದ್ದಳು. ನಾನು ಅತ್ತ ಕಡೆ ಗಮನ ಹರಿಸಲಿಲ್ಲ. ಪುನಃ ನಾನು ನಿದ್ದೆಗೆ ಜಾರಿದೆ. ನಾನು ನಿದ್ದೆಯಿಂದ ಎಚ್ಚೆತ್ತ ಬಳಿಕ ಅವಳು ಅವಳ ವಿಚ್ಛೇದನದ ಶರತ್ತುಗಳನ್ನು ನೀಡಿದಳು.
ಅವಳು ನನ್ನಿಂದ ಏನನ್ನೂ ಬಯಸಲಿಲ್ಲ. ವಿಚ್ಛೇದನೆಯ ಒಂದು ತಿಂಗಳ ಮುಂಚೆ ನೆನಪಿಸಬೇಕು ಎಂದು ಮಾತ್ರ ಹೇಳಿದ್ದಳು. ಆ ಒಂದು ತಿಂಗಳಲ್ಲಿ ನಾವು ಜಗಳಗಳಿಲ್ಲದ ಸಾಮಾನ್ಯ ಬದುಕು ಸಾಗಿಸಬೇಕೆಂದೂ ತಿಳಿಸಿದಳು. ಅವಳು ಹಾಗೆ ಹೇಳಲು ಕಾರಣವೂ ಇತ್ತು. ನಮ್ಮ ಮಗನಿಗೆ ಮಾಸಿಕ ಪರೀಕ್ಷೆಯು ನಡೆಯಲಿಕ್ಕಿರುವುದು ಅದೇ ತಿಂಗಳಲ್ಲಾಗಿತ್ತು. ಮಕ್ಕಳಿಗಾಗಿ ಎಲ್ಲಾ ನೋವನ್ನೂ ನುಂಗಿಕೊಳ್ಳಲು ಆ ತಾಯಿ ಸಿದ್ಧಳಾದಳು. ತಮ್ಮ ಈ ಜಗಳದಲ್ಲಿ ಮಗನನ್ನು ಬಲಿಪಶುವಾಗಿಸಲು ಅವಳು ಬಯಸಲಿಲ್ಲ.
ಈ ಶರತ್ತು ನನಗೆ ಒಪ್ಪಿಗೆಯಾಗಿತ್ತು. ಆದರೆ ಅವಳು ಇನ್ನೂ ಹೆಚ್ಚಿನ ಶರತ್ತನ್ನು ಮುಂದಿಟ್ಟಳು. ನಮ್ಮ ಮದುವೆಯ ದಿನ ನಾನು ಅವಳನ್ನು ಬೆಡ್‍ರೂಮಿಗೆ ಬರಮಾಡಿಕೊಂಡಂತೆ ಪುನಃ ಬರಮಾಡಿಕೊಳ್ಳಬೇಕಂತೆ. ಇದನ್ನು ಆ ಕೊನೆಯ ತಿಂಗಳ ಎಲ್ಲಾ ದಿನಗಳಲ್ಲೂ ಮುಂದುವರಿಸಬೇಕೆಂದು ಹೇಳಿದಳು.
ಅವಳು ಮಕ್ಕಳಾಟಿಕೆಯಲ್ಲಿ ತೊಡಗಿದ್ದಾಳೆಂದು ನನಗೆ ಭಾಸವಾಯಿತು. ನಮ್ಮ ಕೊನೆಯ ದಿನಗಳನ್ನು ಅಸಹನೀಯ ಗೊಳಿಸುತ್ತಾಳೆಂದು ಭಾವಿಸಿದೆ. ಆದರೂ ಅವಳ ಈ ವಿಚಿತ್ರ ಬೇಡಿಕೆಯನ್ನು ಒಪ್ಪಿಕೊಂಡೆ. ನಾನು ನನ್ನ ಪ್ರೇಯಸಿಯೊಂದಿಗೆ ಅವಳ ಈ ಬೇಡಿಕೆಯನ್ನು ತಿಳಿಸಿದೆ. ಅವಳು ಬಿದ್ದು ಬಿದ್ದು ನಕ್ಕಳು. “ಅವಳು ಏನೋ ತಂತ್ರ ಹೂಡುತ್ತಾಳೆ. ಹೇಗಿದ್ದರೂ ಅವಳು ವಿಚ್ಛೇದನವನ್ನು ಎದುರಿಸಲೇ ಬೇಕಾಗಿತ್ತು” ಎಂದು ಪ್ರತಿಕ್ರಿಯಿಸಿದಳು.
ನನಗೆ ವಿಚ್ಛೇದನದ ಆಲೋಚನೆ ಬಂದಂದಿನಿಂದ ನಮ್ಮ ಮಧ್ಯೆ ಯಾವುದೇ ಶಾರೀರಿಕ ಸಂಬಂಧವೇರ್ಪಡಲಿಲ್ಲ. ಮೊದಲ ದಿನ ಅವಳ ಬೇಡಿಕೆಯಂತೆ ನಾನು ಅವಳ ಭುಜದ ಮೇಲೆ ಕೈಯಿರಿಸಿ ರೂಮಿನಿಂದ ಹೊರಬಂದೆವು. ನಮ್ಮ ಮಗ ಹಿಂದಿನಿಂದ ಹೊಡೆಯುತ್ತಾ “ಪಪ್ಪಾ, ನೀವು ತುಂಬಾ ಚೂಟಿ” ಎಂದು ಗೇಲಿ ಮಾಡಿದನು. ಅವನ ಆ ಮಾತು ನನ್ನ ಮನಸ್ಸನ್ನು ಕಲಕಿತು. ನಮ್ಮ ನಟನೆಯನ್ನು ಅವನು ನೈಜತೆಯಾಗಿ ಭಾವಿಸಿದ್ದನು. ನಾನು ಅವಳೊಂದಿಗೆ ಸ್ವಲ್ಪ ಮುಂದೆ ಸಾಗಿದಾಗ ಅವಳು ಬಹಳ ದುಃಖದಿಂದ “ವಿಚ್ಛೇದನೆಯ ವಿಚಾರವನ್ನು ಮಗನಿಗೆ ತಿಳಿಸಬೇಡಿ” ಎಂದು ಮೆಲ್ಲನೆ ಹೇಳಿದಳು. ನಾನು ಅಡ್ಡಡ್ಡ ತಲೆಯಾಡಿಸಿ ಒಪ್ಪಿಗೆ ಸೂಚಿಸಿದೆ. ಮನಸ್ಸಿಗೆ ಏನೋ ಒಂದು ರೀತಿಯ ಖಿನ್ನತೆಯ ಅನುಭವವಾಯಿತು.
ಎರಡನೇ ದಿನ ನಾವು ಇನ್ನೂ ಹೆಚ್ಚು ಬಾಂಧವ್ಯದ ನಟನೆ ಮಾಡಿದೆವು. ಅವಳು ನನ್ನ ಎದೆ ಮೇಲೆ ತಲೆ ಇಟ್ಟಳು. ಅಸಹನೆಯಿಂದ ಸಹಿಸಿಕೊಂಡೆ. ನನಗೆ ಹೆಚ್ಚು ಸಮಯ ಇವಳನ್ನು ಉಳಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡೆ. ಅವಳು ಯೌವನವನ್ನು ದಾಡಿದಂತೆ ತೋಚಿತು. ಅವಳ ಕೆನ್ನೆಯ ಮೇಲೆ ಸುಕ್ಕುಗಳು ಬಿದ್ದಿದ್ದವು. ತಲೆಯ ಕೂದಲು ಕಂದು ಬಣ್ಣಕ್ಕೆ ತಿರುಗಿತ್ತು. ವಿವಾಹವು ಅವಳಿಂದ ಯೌವನವನ್ನು ಕಸಿದುಕೊಂಡಿತ್ತು.
ನಾಲ್ಕನೆಯ ದಿನ, ನಾನು ಅವಳೊಂದಿಗೆ ಹೆಜ್ಜೆ ಹಾಕುತ್ತಿದ್ದಾಗ (ನನ್ನ ಒಂದು ಕೈ ಅವಳ ಭುಜದ ಮೇಲಿತ್ತು) ಅನ್ಯೋನ್ಯತೆಯ ಭಾವವೊಂದು ಮರಳಿದಂತೆ ಭಾಸವಾಯಿತು. ತನ್ನ ಜೀವನದಿಂದ 10 ವರ್ಷಗಳನ್ನು ನನಗಾಗಿ ನೀಡಿದವಳು ಇದೇ ಮಹಿಳೆ ಎಂಬ ಗುರುತು ಪ್ರಜ್ಞೆಯು ಜಾಗೃತವಾಯಿತು. ಐದು ಮತ್ತು ಆರನೇ ದಿನ, ನಾವು ಒಟ್ಟಾಗಿ ಸೇರಿ ಈ ಮನೆಯನ್ನು ಸ್ವರ್ಗವಾಗಿಸಿದ್ದು, ಉತ್ತಮ ಸಂತಾನವನ್ನು ಪಡೆದದ್ದು ಎಲ್ಲವೂ ನೆನಪಿಗೆ ಬಂತು.
ಈ ವಿಷಯಗಳೊಂದನ್ನೂ ನಾನೂ ನನ್ನ ಪ್ರೇಯಸಿಯೊಂದಿಗೆ ಹೇಳಲಿಲ್ಲ. ನಾನು ನನ್ನ ಪತ್ನಿಯ ಕುರಿತು ನನಗರಿವಿಲ್ಲದೆಯೇ ಕಾಳಜಿ ವಹಿಸಲು ಪ್ರಾರಂಭಿಸಿದೆ. ವಿಚ್ಛೇದನಕ್ಕೆ ದಿನಗಳು ಉರುಳುತ್ತಿತ್ತು. ಮಗನು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯುತ್ತಿದ್ದ. ನಮಗೆ ತಿಳಿಯದಂತೆಯೇ ಬದುಕು ಸಾಮಾನ್ಯವಾಗ ತೊಡಗಿತು. ನಾನು ಆಫೀಸಿಗೆ ಹೋಗುವಾಗ ಯಾವ ಬಟ್ಟೆ ಧರಿಸಬೇಕು ಎಂದು ಅವಳು ಹೇಳುತ್ತಿದ್ದಳು. ಅವಳು ದಿನಾಲೂ ಒಂದು ಬಟ್ಟೆ ಧರಿಸುತ್ತಿದ್ದಳು. ಅವಳಲ್ಲಿ ಹಲವು ಬಟ್ಟೆಗಳಿದ್ದರೂ ದಿನಗಳೆದಂತೆ ಅವೆಲ್ಲವೂ ದೊಡ್ಡದಾಯಿತು. ಅಂದರೆ ಅವಳು ತೆಳ್ಳಗಾಗ ತೊಡಗಿದಳು. ಇದು ನನ್ನನ್ನು ಗಾಬರಿಗೊಳಿಸಿತು.
ಮರುದಿನ ಅವಳು ನೋವು ಸಹಿಸುತ್ತಿದ್ದಾಳೆ ಎಂಬಂತೆ ತೋಚಿತು. ನಾನು ನಿಧಾನವಾಗಿ ಅವಳ ಹಣೆಯ ಮೇಲೆ ಕೈಯಿಟ್ಟೆ. ಅದೇ ಸಮಯ ನಮ್ಮ ಮಗ ಅಲ್ಲಿಗೆ ಬಂದನು “ಪಪ್ಪಾ ತಾಯಿಯನ್ನು ಚೆನ್ನಾಗಿ ನೋಡಿಕೋ” ಎಂದು ಕಮೆಂಟನ್ನೂ ಹೊಡೆದನು. ಅವಳು ಅವನನ್ನು ಹತ್ತಿರ ಕರೆದು ಬರಸೆಳೆದು ತಬ್ಬಿಕೊಂಡಳು. ನಾನು ನನ್ನ ಮುಖವನ್ನು ಬೇರೆಡೆಗೆ ತಿರುಗಿಸಿದೆ. ಇದನ್ನು ಕಂಡು ಕೊನೆಯ ಗಳಿಗೆಯಲ್ಲಿ ನನ್ನ ಮನಸ್ಸು ಬದಲಾದರೆ ಎಂದರೆ ಭಯವಾಯಿತು. ನಾನು ಅವಳನ್ನು ಬಳಸುತ್ತಾ ರೂಮಿನಿಂದ ಹೊರಬಂದೆ. ನಾನು ಬಿಗಿಯಾಗಿ ಹಿಡಿದಿದ್ದೆ. ಅದು ನಮ್ಮ ಮದುವೆಯ ಆರಂಭ ದಿನಗಳಂತಿತ್ತು. ಆದರೆ ಈಗ ಅವಳು ತೆಳ್ಳಗಾದುದು ನನ್ನನ್ನು ದುಃಖಕ್ಕೀಡು ಮಾಡಿತು.
ಕೊನೆಯ ದಿನ ನಾವು ಕೈ ಕೈ ಹಿಡಿದು ನಡೆಯುವಾಗ ನನ್ನ ಹೆಜ್ಜೆಯು ಭಾರವಾಗ ತೊಡಗಿತು. ಏನೋ ಅಮೂಲ್ಯವಾದ ಒಂದನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಭಾವನೆ ಮೂಡಿತು. ಅಪರಾಧಿ ಭಾವವು ನನ್ನನ್ನು ಕಿತ್ತು ತಿನ್ನ ತೊಡಗಿತು. ನಾನು ಕಾರು ಚಲಾಯಿಸುತ್ತ ಬೇಗನೇ ನನ್ನ ಪ್ರೇಯಸಿಯ ಬಳಿಗೆ ಹೋದೆ. ಅವಳ ಮನೆಯ ಬಾಗಿಲನ್ನು ತಟ್ಟಿದಾಗ ಅವಳು ಬಾಗಿಲು ತೆರೆದಳು. ನನ್ನನ್ನು ಕಂಡು ಸಂತಸಪಟ್ಟಳು. ನಾನು ಅವಳೊಂದಿಗೆ ಹೇಳಿದೆ. “ಸಾರೀ ಕಣೇ. ನಾನು ನನ್ನ ಪತ್ನಿಯೊಂದಿಗೆ ವಿಚ್ಛೇದನ ಪಡೆಯುತ್ತಿಲ್ಲ” ಇದನ್ನು ಕೇಳಿದ ಅವಳು ನಿಬ್ಬೆರಗಾದಳು. ಅಯೋಮಯವಾಗಿ ನನ್ನ ಹಣೆ ಮೇಲೆ ಕೈಯಿಟ್ಟು  ಕೇಳಿದಳು “ನೀನು ಜ್ವರದಿಂದ ಬಳಲುತ್ತಿದ್ದಿಯಾ?” ನಾನು ಅವಳ ಕೈಯನ್ನು ಸರಿಸಿ ಹೇಳಿದೆ. “ ಇಲ್ಲ ಕಣೆ. ನಾನು ಹೇಳುವುದು ನಿಜ. ನನ್ನ ತಲೆ ಕೆಟ್ಟಿಲ್ಲ. ಇನ್ನು ನಾವು ಒಟ್ಟಾಗಿ ಬಾಳುತ್ತೇವೆ.”
ನನ್ನ ವೈವಾಹಿಕ ಜೀವನವು ಅವಳಿಂದಾಗಿ ಬಹುಶಃ ನೀರಸವಾಗಿರಬಹುದು. ನಾನು ಬದುಕಿನ ಮೌಲ್ಯಗಳನ್ನು ಅರ್ಥಮಾಡಿಕೊಂಡಿರಲಿಲ್ಲ. ಆದರೆ ಈಗ ನನಗೆ ಅರ್ಥವಾಗುತ್ತಿದೆ. ಮದುವೆಯಾಗಿ ಅವಳನ್ನು ಮನೆಗೆ ಕರೆತಂದಂದಿನಿಂದ ಇನ್ನು ಮರಣದ ತನಕ ಅವಳನ್ನು ಕೈಬಿಡಲಾರೆ.
ನನ್ನ ಪ್ರೇಯಸಿಯು ಬಲವಾಗಿ ನನ್ನ ಕೆನ್ನೆಗೆ ಬಾರಿಸಿದಳು. ನನ್ನನ್ನು ಬಾಗಿಲಿನಿಂದ ಹೊರ ದಬ್ಬಿದಳು. ಅವಳು ಕಣ್ಣೀರು ಸುರಿಸಿದಳು. ನನ್ನ ಪತ್ನಿಯ ಪ್ರೀತಿಯ ಮುಂದೆ ಅವಳ ಕಣ್ಣೀರು ನಗಣ್ಯವೆಂದು ತೋರಿತು. ನಾನು ಮನೆಗೆ ಮರಳಿದೆ.
ದಾರಿಯಲ್ಲಿ ಕಾರು ನಿಲ್ಲಿಸಿ ನಾನು ನನ್ನ ಪತ್ನಿಗೋಸ್ಕರ ಒಂದು ಬೊಕ್ಕೆ ಹೂವು ಖರೀದಿಸಿದೆ. ಅಂಗಡಿಯವಳು “ಅದರ ಮೇಲೆ ಏನು ಬರೆಯಲಿ” ಎಂದು ಕೇಳಿದಳು. ನಾನು ಮುಗುಳ್ನಕ್ಕು ಹೇಳಿದೆ, “ಮರಣದ ತನಕ ಪ್ರತೀ ದಿನ ನಿನ್ನ ಆರೈಕೆ ಮಾಡುತ್ತೇನೆ.” ನಾನು ಹೂವು ಹಿಡಿದುಕೊಂಡು ಮನೆಗೆ ತಲುಪಿದೆ. ಮುಖದಲ್ಲಿ ಮುಗುಳ್ನಗು ತರಲು ಮರೆಯಲಿಲ್ಲ. ನಾನು ಬಹಳ ಜತನದಿಂದ ಹೆಜ್ಜೆಯಿರಿಸುತ್ತ ಬೆಡ್‍ರೂಮಿಗೆ ಹೋದೆ. ಅವಳು ಹಾಸಿಗೆಯಲ್ಲಿ ಮಲಗಿದ್ದಳು. ನಾನು ಬಂದ ಸದ್ದು ಕೇಳಿ ಅವಳು ನೋಡಲಿಲ್ಲ. “ಏಕೆ ಚಿನ್ನಾ ಕೋಪವೇ” ಎಂದು ಅವಳು ಮಗ್ಗುಲು ಬದಲಿಸಿ ಕೇಳಿದೆ. ನನಗೆ ಆಕಾಶವೇ ಕಳಚಿಬಿದ್ದಂತಾಯಿತು. ಮೂಗಿನಿಂದ ರಕ್ತ ಹರಿದಿತ್ತು. ಮರಳಿ ಬಾರದ ಲೋಕಕ್ಕೆ ನನ್ನನ್ನು ಬಿಟ್ಟು ಒಂಟಿಯಾಗಿ ಮರಳಿದ್ದಳು.
                                                                        ...........
ಅವಳು ಒಂದು ತಿಂಗಳಿನಿಂದ ಕ್ಯಾನ್ಸರಿನಿಂದ ಬಳಲುತ್ತಿದ್ದಳು. ನಾನು ನನ್ನ ಪ್ರೇಯಸಿಯೊಂದಿಗೆ ನಿಭಿಡತೆಯಿಂದಿರುವಾಗ ಅವಳ ಈ ರೋಗದ ಕಡೆಗೆ ನನ್ನ ಗಮನವೇ ಹರಿಯಲಿಲ್ಲ. ತಾನು ಬೇಗನೇ ಮರಣ ಹೊಂದುತ್ತೇನೆ ಎಂದು ಅವಳಿಗೆ ತಿಳಿದಿತ್ತು. ಆದರೂ ತನ್ನ ಎಲ್ಲಾ ನೋವನ್ನು ಮರೆತು ನನ್ನನ್ನು ಆ ಕೆಡುಕಿನಿಂದ ತಡೆಯಲು ಪ್ರಯತ್ನಿಸಿ ಯಶಸ್ವಿಯೂ ಆಗಿದ್ದಳು. ಆದರೆ ಅದನ್ನು ಕಾಣುವ ಸೌಭಾಗ್ಯ ಅವಳಿಗೆ ದೊರೆಯಲಿಲ್ಲ. ಅಮೂಲ್ಯ ಸಂಪತ್ತು ನನ್ನ ಕೈಯಲ್ಲಿತ್ತು. ಅವರ ಕುರಿತು ನನಗೆ ಪ್ರಜೆ ಇರಲಿಲ್ಲ. ಅದರ ಮೌಲ್ಯವು ಮನವರಿಕೆಯಾಗುವಾಗ ಅದು ನನ್ನಿಂದ ದೂರವಾಯಿತು. ಈಗ ನನಗೆ ಕಣ್ಣೀರೇ ಗತಿಯಾಯಿತು. ಹಣ, ಸಂಪತ್ತು, ಅಂತಸ್ತು, ಅಧಿಕಾರ ಎಲ್ಲವೂ ಪತ್ನಿಯ ಪ್ರೀತಿಯ ಮುಂದೆ ಕ್ಷುಲ್ಲಕ ಎಂಬ ಮಾತು ಎಷ್ಟು ನಿಜ ಅಲ್ಲವೇ?
(ಸತ್ಯ ಆಧಾರಿತ ಕಥೆ)
ಸಂಗ್ರಹ: ಇಮ್ತಿಯಾಝ್ ಪೆರ್ಲ

Tuesday 31 July 2012

ಬ್ಯಾರಿ ಹುಡುಗರು, ಹಿಂದೂ ಹುಡುಗಿಯರು ಎಂದೆಲ್ಲಾ ಮಾತನಾಡುತ್ತಿದ್ದರು…


ನಾವೀನ್ ಸೂರಿಂಜೆ  ಬರೆಯುತ್ತಾರೆ   
ಜುಲೈ 28 ಸಂಜೆ 6.45 ರ ವೇಳೆ. ನನ್ನ ಸುದ್ದಿ ಮೂಲ ಯುವಕನೊಬ್ಬ ನನಗೆ ಕರೆ ಮಾಡಿದ್ದ. ಆತ ಪಡೀಲ್ ನಿವಾಸಿ. ಆತ ನನಗೆ ತಿಳಿಸಿದ್ದಿಷ್ಟು. “ನವೀನಣ್ಣ, ನಮ್ಮ ಪಡೀಲ್ ಜಂಕ್ಷನ್ನಲ್ಲಿ ಒಂದು ಟಿಂಬರ್ ಯಾಡರ್್ ಇದೆಯಲ್ವ. ಅಲ್ಲಿ ಒಂದು ಸುಮಾರು 30 ಮಂದಿ ಯುವಕರು ನಿಂತುಕೊಂಡು ಮಾತನಾಡುತ್ತಿದ್ದರು. ಇನ್ಯಾರನ್ನೋ ಕರೆಯಲು ಇನ್ಯಾರಿಗೋ ಒತ್ತಾಯಿಸುತ್ತಿದ್ದರು. ಬೈಕುಗಳನ್ನು ರೆಡಿ ಇಟ್ಟುಕೊಳ್ಳಿ ಎನ್ನುತ್ತಿದ್ದರು. ಬಹುಷಃ ಅವರು ನಮ್ಮ ಮೇಲಿನ ಗುಡ್ಡೆಯಲ್ಲಿರುವ ಗೆಸ್ಟ್ ಹೌಸ್ಗೆ ದಾಳಿ ಮಾಡಲು ಯೋಚಿಸುತ್ತಿದ್ದಾರೆ ಎನಿಸುತ್ತದೆ. ಬ್ಯಾರಿ ಹುಡುಗರು, ಹಿಂದೂ ಹುಡುಗಿಯರು ಎಂದೆಲ್ಲಾ ಮಾತನಾಡುತ್ತಿದ್ದರು” ಎಂದ. ಅವರು ಯಾವ ಸಂಘಟನೆಯವರು ಅಂತಿ ತಿಳ್ಕೋ ಮಾರಾಯ ಎಂದೆ ನಾನು. ಅವರು ಹಿಂದೂ ಸಂಘಟನೆಗಳು ಎಂಬುದಷ್ಟೇ ಅವನಿಗೆ ಖಚಿತವಾಯ್ತೆ ವಿನಹ ನಿಖರವಾಗಿ ಯಾವ ಸಂಘಟನೆ ಎಂಬುದು ತಿಳಿಯಲಿಲ್ಲ.
ತಕ್ಷಣ ನನ್ನ ಮನಸ್ಸಿಗೆ ಬಂದ ಪ್ರಶ್ನೆ “ಈ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕೇ ಬೇಡವೇ” ಎಂಬುದು. ದಾಳಿ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಯಾಕಾಗಿ, ಯಾರ ಮೇಲೆ, ಯಾವ ಸಂಘಟನೆ, ಎಲ್ಲಿಗೆ ದಾಳಿ ಮಾಡುತ್ತಿದೆ ಎಂಬುದೂ ಗೊತ್ತಿಲ್ಲ. ಒಂದು ತೀರಾ ಪ್ರಾಥಮಿಕ ಮಾಹಿತಿಯಷ್ಠೆ ತಿಳಿದಿದೆ. ಸಂಘಟನೆಯ ಕಾರ್ಯಕರ್ತರೇ ಫೋನಾಯಿಸಿದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು. ನನ್ನ ಸುದ್ದಿಮೂಲ ಮಾಹಿತಿ ನೀಡಿದ್ದರಿಂದ ಆ ಸುದ್ದಿಯನ್ನು ಖಚಿತಪಡಿಸಿಕೊಂಡೇ ಪೊಲೀಸರಿಗೆ ಮಾಹಿತಿ ನೀಡೋಣ ಎಂದುಕೊಂಡು ನಾನು ಮತ್ತು ನನ್ನ ಕ್ಯಾಮರಮೆನ್ ಪಡೀಲ್ ಗುಡ್ಡೆಯ ಮೇಲಿರುವ ಗೆಸ್ಟ್ ಹೌಸ್ ಕಡೆ ಬೈಕಿನಲ್ಲಿ ತೆರಳಿದೆ.
ಒಂದೈದು ನಿಮಿಷದಲ್ಲಿ ಪಡೀಲ್ ಗುಡ್ಡೆಯಲ್ಲಿರುವ ಮಾನರ್ಿಂಗ್ ಮಿಸ್ಬಾ ಎನ್ನುವ ಹೋಂ ಸ್ಟೇ ಅಥವಾ ಗೆಸ್ಟ್ ಹೌಸ್ ಹೊರಭಾಗದಲ್ಲಿ ನಾನು ಮತ್ತು ನನ್ನ ಕ್ಯಾಮರಮೆನ್ ಇದ್ದೆವು. ಆಗ ಅಲ್ಲಿ ಯಾವ ದಾಳಿಕೋರರೂ ಇರಲಿಲ್ಲ. ಐದು ನಿಮಿಷ ಅಲ್ಲೇ ಕಾದು ನಿಂತೆವು. ಯಾರು ಯಾಕಾಗಿ ಈ ಹೋಂ ಸ್ಟೇಗೆ ದಾಳಿ ಮಾಡಲು ಸಿದ್ದತೆ ಮಾಡುತ್ತಾರೆ ಎಂಬುದು ಗೊತ್ತೇ ಆಗಲಿಲ್ಲ. ಪಡೀಲ್ ಹೆದ್ದಾರಿಯಿಂದ ಅಂದಾಜು ಅರ್ಧ ಕಿಮಿ ರಸ್ತೆ ದಾರಿಯಲ್ಲಿ ಈ ಹೋಂ ಸ್ಟೇ ಇದೆ. ಇದರ ಸುತ್ತಲೂ ದೊಡ್ಡದಾದ ಕಂಪೌಂಡ್ ಇದೆ. ಒಂದೇ ಒಂದು ಗೇಟ್ ಇದೆ. ಗೇಟ್ನಿಂದ 60 ಮೀಟರ್ ದೂರದಲ್ಲಿ ಹೋಂ ಸ್ಟೇ ಬಂಗಲೆ ಇದೆ. ನಾನು ಗೇಟ್ ಹತ್ತಿರ ನಿಂತು ಒಮ್ಮೆ ಇಡೀ ಬಂಗಲೆಯತ್ತಾ ಕಣ್ಣಾಡಿಸಿದೆ. ಅಲ್ಲಿ ದಾಳಿ ಮಾಡಲು ಕಾರಣವಾಗುವಂತಹ ಯಾವುದೇ ಆ್ಯಕ್ಟಿವಿಟೀಸ್ ನನಗೆ ಗೋಚರಿಸಲಿಲ್ಲ. ಒಬ್ಬಳು ಹುಡುಗಿ ಹೊರಗೆ ಚೇರ್ನಲ್ಲಿ ಕುಳಿತಿದ್ದಳು. ಇನ್ನಿಬ್ಬರು ಹುಡುಗರು ಬಂಗಲೆಯ ಮತ್ತೊಂದು ಮೂಲೆಯಲ್ಲಿ ನಿಂತುಕೊಂಡು ಮೊಬೈಲ್ನಲ್ಲಿ ಆಟವಾಡುತ್ತಿದ್ದರು. ಅವರು ಯಾವುದೇ ರೀತಿಯಲ್ಲೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರಲಿಲ್ಲ. ಆದುದರಿಂದ ದಾಳಿಕೋರರು ಬಯಸುವ ಸನ್ನಿವೇಶ ಅಲ್ಲಿರಲಿಲ್ಲ. ಆದುದರಿಂದ ಆಗಲೂ ನನಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಅನ್ನಿಸಲಿಲ್ಲ. ನನ್ನ ಮಾಹಿತಿ ತಪ್ಪಾದರೆ ಒಂದಿಡೀ ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಮತ್ತು ಹೋಂ ಸ್ಟೇಯಲ್ಲಿದ್ದವರಿಗೆ ವಿನಾಕಾರಣ ಪೊಲೀಸ್ ಕಿರುಕುಳ ನೀಡಲು ಕಾರಣನಾಗುವಂತಾಗುತ್ತೇನೆ ಎಂಬ ಆತಂಕದಿಂದಲೇ ಮಾಹಿತಿ ನೀಡಲಿಲ್ಲ. ನಾನು ಈ ರೀತಿ ಯೋಚಿಸುತ್ತಿರುವಾಗಲೇ ಸುಮಾರು ಮೂವತ್ತೂ ಅಧಿಕ ಇದ್ದ ತಂಡವೊಂದು ಹೋಂ ಸ್ಟೇಯ ಗೇಟಿನತ್ತಾ ಬರುತ್ತಿತ್ತು. ನಾನು ತಕ್ಷಣ ಕುತೂಹಲದಿಂದಲೇ ಕೇಳಿದೆ. “ಏನು ವಿಷಯ? ಏನಾಗ್ತಾ ಇದೆ ಇಲ್ಲಿ ?” ಎಂದು ತುಳುವಿನಲ್ಲಿ ಪ್ರಶ್ನಿಸಿದೆ. ತಕ್ಷಣ ಯುವಕನೊಬ್ಬ “ಬ್ಯಾರಿಗಳು ನಮ್ಮ ಹಿಂದೂ ಹುಡುಗಿಯರನ್ನು ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಅವರನ್ನು ಬಿಡಬಾರದು” ಎಂದ. ಅಷ್ಟರಲ್ಲಿ ಗುಂಪಿನಲ್ಲಿದ್ದ ಇನ್ನಿತರ ಯುವಕರು ಹೊರಗೆ ಕುಳಿತಿದ್ದ ಹುಡುಗಿಯತ್ತಾ ಕೈ ತೋರಿಸಿ “ಅಲ್ಲಿ ಅಲ್ಲಿ ಇದ್ದಾಳೆ ಹುಡುಗಿ, ಅಗೋ ಹುಡುಗರು ಅಲ್ಲಿದ್ದಾರೆ ” ಎಂದು ಯುವಕ ಯುವತಿಯರತ್ತಾ ಓಡಿಕೊಂಡು ದಾಳಿಗೆ ಸಿದ್ದರಾದರು. ತಕ್ಷಣ ದಾಳಿ ಅರಿವಾದ ಯುವತಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಬಂಗಲೆಯ ಒಳ ಹೋದಳು. ಮತ್ತು ಬಾಗಿಲು ಹಾಕಲು ಯತ್ನಿಸಿದಳು. ಆಗ ಸುಮಾರು 30 ರಷ್ಟಿದ್ದ ದಾಳಿಕೋರರು ಬಾಗಿಲನ್ನು ಬಲವಾಗಿ ದೂಡಿ ಬಾಗಿಲು ತೆರೆಯುವಲ್ಲಿ ಸಫಲರಾದರು.
ಈಗ ನನ್ನ ಪ್ರಜ್ಞೆ ನಿಜವಾಗಿಯೂ ಜಾಗೃತವಾಗಿತ್ತು. ತಕ್ಷಣ ನನ್ನ ಕಚೇರಿ ಮೊಬೈಲ್ 9972570044 ನಿಂದ ಮಂಗಳೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್ಗೆ 9480805330 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ಆಗ ಸುಮಾರು 7.15 ರ ಸಂಜೆ ಸಮಯ. ರವೀಶ್ ನಾಯಕ್ ನನ್ನ ಕರೆ ಸ್ವೀಕರಿಸಲೇ ಇಲ್ಲ. ಒಂದು ಕಡೆಯಿಂದ ದಾಳಿ ಪ್ರಾರಂಭವಾಗಿದೆಯಷ್ಟೆ. ಇನ್ನೇನು ಆಗುತ್ತೋ ಎಂಬ ಆತಂಕದ ನಡುವೆಯೇ ಕಕ್ಕಾಬಿಕ್ಕಿಯಾದ ಹುಡುಗಿಯರು ಎಲ್ಲೆಲ್ಲೋ ಓಡಲು ಶುರುವಿಟ್ಟುಕೊಂಡಿದ್ದರು. ಪೊಲೀಸರಿಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಬೇರೆ ದಾರಿ ಕಾಣದೆ ಟಿವಿ 9 ವರದಿಗಾರನಾಗಿರುವ ನನ್ನ ಗೆಳೆಯ ರಾಜೇಶ್ ರಾವ್ ಬಳಿ ಪೊಲೀಸರಿಗೆ ಫೋನ್ ಮಾಡುವಂತೆ ಹೇಳಿದೆ. ರಾಜೇಶ್ ರಾವ್ ಅವರ ಮೊಬೈಲ್ನಿಂದ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್ಗೆ ಕರೆ ಮಾಡಿದರು. ಆಗಲೂ ರವೀಶ್ ನಾಯಕ್ ಕರೆ ಸ್ವೀಕರಿಸಲೇ ಇಲ್ಲ.
ನಾವು ಇನ್ಸ್ಸ್ಪೆಕ್ಟರ್ಗೆ ಫೋನ್ ಕರೆ ಮಾಡುತ್ತಿದ್ದಂತೆ ನಮ್ಮ ಕ್ಯಾಮರಾಮೆನ್ ದಾಳಿಕೋರರ ಹಿಂದೆಯೇ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದ. ನಾನು ಮತ್ತು ನನ್ನ ಕ್ಯಾಮರಮೆನ್ ಮಾತ್ರ ಅಲ್ಲಿದ್ದೆವು. ಅಷ್ಟರಲ್ಲಿ ಸ್ಥಳೀಯ ಸಹಾಯ ಎಂಬ ಕೇಬಲ್ ಚಾನೆಲ್ ಕ್ಯಾಮರಮೆನ್ ಶರಣ್ ಮತ್ತು ಫೋಟೋಗ್ರಾಫರ್ ವಿನಯ ಕೃಷ್ಣ ಅಲ್ಲಿಗೆ ಬಂದಿದ್ದರು. ನಾನು ಎಲ್ಲವನ್ನೂ ಮೂಕ ಪ್ರೇಕ್ಷಕನಾಗಿ ನೋಡುತ್ತಿದ್ದೇನೆ. ನನಗೇನೂ ಮಾಡಲಾರದ ಅಪರಾಧಿ ಮನೋಭಾವ ನನ್ನಲ್ಲಿ ಮೂಡಿತ್ತು. ದಾಳಿಕೋರರಲ್ಲಿ ಶೇಕಡಾ 50ಕ್ಕೂ ಅಧಿಕ ಮಂದಿ ಮಧ್ಯಪಾನ ಮಾಡಿದ್ದರು. ನಾನು ಹೇಳಿದರೂ ಕೇಳೋ ಸ್ಥಿತಿಯಲ್ಲಿ ಇರಲಿಲ್ಲ. ಈ ಜಗತ್ತಿನಲ್ಲಿ ಏನೇನೋ ಹಿಂಸೆಗಳು ನಡೆದಿರಬಹುದು. ಆದರೆ ನನ್ನ ಜೀವಮಾನದಲ್ಲಿ ಇಂತಹ ಹಿಂಸೆಯನ್ನು ನೋಡಿರಲಿಲ್ಲ. ನನ್ನ ಕ್ಯಾಮರಾಮೆನ್ ಎಲ್ಲೆಲ್ಲಿ ಹೊಡೆಯುತ್ತಾರೋ ಅಲ್ಲಲ್ಲಿ ಓಡುತ್ತಿದ್ದ. ನಾನು ನೋಡುತ್ತಿದ್ದೆ ಮತ್ತು ಸಾಧ್ಯವಾದಷ್ಟೂ ಕಿರಿಚುತ್ತಿದ್ದೆ. “ಏ ಹುಡುಗಿರಿಗೆ ಹೊಡಿಬೇಡ್ರಿ” ಎಂತ ಬೊಬ್ಬೆ ಹೊಡೆಯುತ್ತಿದ್ದೆ. ನನ್ನ ಬೊಬ್ಬೆ ನನ್ನ ಕ್ಯಾಮರಾದಲ್ಲಿ ದಾಖಲಾಗಿದೆಯೇ ವಿನಹ ದಾಳಿಕೋರರ ಹೃದಯಕ್ಕೆ ತಟ್ಟಲೇ ಇಲ್ಲ. ಹಲ್ಲೆಗೆ ಒಳಗಾದ ಯುವಕರು ಗೋಗೆರೆಯುತ್ತಿದ್ದರು. “ಪ್ಲೀಸ್ ಬಿಟ್ಟುಬಿಡಿ. ನಾವು ಬತರ್್ ಡೇ ಪಾಟರ್ಿ ನಡೆಸುತ್ತಿದ್ದೇವೆ, ಪ್ಲೀಸ್” ಎಂದು ಕಾಲಿಗೆ ಬೀಳುತ್ತಾನೆ. ಆದರೂ ಕ್ರೂರಿ ದಾಳಿಕೋರರ ಮನಸ್ಸು ಕರಗುವುದಿಲ್ಲ. ಇಷ್ಟೇ ಆಗಿದ್ದರೆ ನಾನು ಮರೆತುಬಿಡುತ್ತಿದ್ದೆ. ಆದರೆ ಮುಂದೆ ನನ್ನ ಕಣ್ಣ ಮುಂದೆ ಬಂದಿದ್ದು ಭೀಭತ್ಸ ದೃಶ್ಯಗಳು.
ನಾಲ್ವರು ಹುಡುಗರಿಗೆ ದಾಳಿಕೋರರು ಬಡಿಯುತ್ತಿರುವ ದೃಶ್ಯ ನೋಡಿ ಶಾಕ್ಗೆ ಒಳಗಾದ ಯುವತಿಯರು ದಿಕ್ಕಾಪಾಲಾಗಿ ಓಡಲು ಶುರುವಿಟ್ಟುಕೊಂಡರು. ಬಂಗಲೆಯ ತುಂಬಾ ಓಡುತ್ತಿರುವ ಯುವತಿಯರ ಹಿಂದೆ ಒಂದಷ್ಟು ದಾಳಿಕೋರರ ಓಟ ನಡೆಯುತ್ತಿತ್ತು. ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಒಬ್ಬಳು ಹುಡುಗಿ ಒಂದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಅವಳನ್ನು ಹಿಡಿದುಕೊಂಡ ಇಪ್ಪತ್ತೂ ಅಧಿಕ ದಾಳಿಕೋರ ಕಾರ್ಯಕರ್ತರು ಆಕೆಯ ವಸ್ತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆಕೆಯ ಕೆನ್ನೆಗೆ ಬಿಗಿದು, ಗೋಡೆಗೆ ನೂಕಿದ್ದಾರೆ. ಅಷ್ಟರಲ್ಲಿ ಪಿಂಕ್ ಡ್ರೆಸ್ ತೊಟ್ಟುಕೊಂಡಿದ್ದ ಹುಡುಗಿಯೊಬ್ಬಳು ಓಡಲು ಶುರುವಿಟ್ಟುಕೊಂಡಳು. ಆಕೆಯನ್ನು ಹಿಡಿದ ಗೂಂಡಾ ದಾಳಿಕೋರರು ಅಕ್ಷರಶ ಆಕೆಯನ್ನು ಬೆತ್ತಲು ಮಾಡಿದ್ದಾರೆ. ಒಂದು ತುಂಡು ವಸ್ತ್ರ ಹೊರತುಪಡಿಸಿ ವಿವಸ್ತ್ರ ಮಾಡಿದ ನಂತರ ಆಕೆಯ ಅಂಗಾಂಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ. ಇದು ನನ್ನನ್ನು ಅಕ್ಷರಶ ಅಧೀರನನ್ನಾಗಿಸಿದ ಧೃಶ್ಯ. ಈ ರೀತಿಯ ದೃಶ್ಯವನ್ನು ನಾನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಕೇಳಿದ್ದೆ. ಇವೆಲ್ಲವೂ ವಿಶುವಲ್ ಆಗದೇ ಇರುವಂತದ್ದು. ಶೂಟಿಂಗ್ ಆಗಿದ್ದು ಸ್ವಲ್ಪವೇ ಸ್ವಲ್ಪ ಭಾಗ. ಆನಂತರ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹುಡುಗ ಹುಡುಗಿಯರನ್ನು ಒಂದೇ ಕೋಣೆಯಲ್ಲಿ ಹಾಕಿ ಚಿಲಕ ಹಾಕಿದರು. ಇವೆಲ್ಲವೂ ನಡೆದಿದ್ದು ಮಿಂಚಿನ ವೇಗದಲ್ಲಿ. ಹೆಚ್ಚೆಂದರೆ 15 ನಿಮಿಷದಲ್ಲಿ ಇವೆಲ್ಲವೂ ಮುಗಿದು ಹೋಗಿತ್ತು.
ದಾಳಿಕೋರರ ಕಾರ್ಯಾಚರಣೆ ಒಂದು ಹಂತಕ್ಕೆ ಮುಗಿದ ನಂತರ ಪೊಲೀಸ್ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್, ಪೊಲೀಸ್ ಎಸೈ ಮುನಿಕಂಠ ನೀಲಸ್ವಾಮಿ ಮತ್ತು ಪೋಲೀಸ್ ಪೇದೆಗಳು ಬಂದಿದ್ದಾರೆ. ವಿಶೇಷ ಎಂದರೆ ಪೊಲೀಸರಿಗೆ ದಾಳಿಕೋರರ ಜೊತೆ ಮೊದಲೇ ಸಂಪರ್ಕ ಇರೋ ರೀತಿಯಲ್ಲಿ ಪೊಲೀಸರು ವತರ್ಿಸಿದ್ದಾರೆ. ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಪೊಲೀಸರು ದಾಳಿಕೋರರ ಜೊತೆ ಮಾತಕತೆಯಲ್ಲಿ ತಲ್ಲೀನರಾಗಿದ್ದರು. ದಾಳಿಕೋರರ ಬಂಧಿಸುವ ಬದಲು ಅವರ ಜೊತೆ ಹರಟೆ ಹೊಡೆಯುತ್ತಿರುವುದು ನನಗೆ ಆಶ್ಚರ್ಯ ಉಂಟು ಮಾಡಿತ್ತು. ಇವೆಲ್ಲಾ ನಡೆಯುತ್ತಿರಬೇಕಾದರೆ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ. ತಕ್ಷಣ ಪೊಲೀಸರು ಆ ಯುವಕನನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರ ವಶದಲ್ಲಿದ್ದ ಯುವಕನಿಗೆ ದಾಳಿಕೋರರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದರು.
ಅಷ್ಟರಲ್ಲಿ ನಮ್ಮ ಇನ್ನಷ್ಟೂ ಕ್ಯಾಮರಮೆನ್ಗಳು ಬಂದಿದ್ದರು. ನಾನು ನನ್ನ ಕ್ಯಾಮರಮೆನ್ ಜೊತೆ ಕಚೇರಿಗೆ ಬಂದು ಎಲ್ಲಾ ವಿಝುವಲ್ಸ್ ಬೆಂಗಳೂರು ಕಚೇರಿಗೆ ಅಪ್ಲಿಂಕ್ ಮಾಡಿದೆ. 7.45 ಕ್ಕೇ ವರದಿ ಪ್ರಕಟವಾಯಿತು. ವರದಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ನಮ್ಮ ಚಾನೆಲ್ನಲ್ಲಿ ಬರುತ್ತಿದ್ದ ವರದಿ ಮತ್ತು ದೃಶ್ಯಗಳನ್ನು ರಾಷ್ಟ್ರೀಯ ವಾಹಿನಿಗಳು ಬಳಕೆ ಮಾಡಿಕೊಂಡು ಸುದ್ಧಿ ಪ್ರಕಟಿಸಿದವು. ತಕ್ಷಣ ಇದೊಂದು ರಾಷ್ಟ್ರೀಯ ಸುದ್ಧಿಯಾಗಿ ಮಾರ್ಪಡಾಗಿತ್ತು. ಇದರಿಂದ ತೀವ್ರ ಕೋಪಗೊಂಡಿದ್ದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನನ್ನ ಗೆಳೆಯ, ಟಿವಿ 9 ವರದಿಗಾರ ರಾಜೇಶ್ ರಾವ್ಗೆ ದೂರವಾಣಿ ಕರೆ ಮಾಡಿದ್ದಾರೆ. ರಾಜೇಶ್ಗೆ ಸೀಮಂತ್ ಕುಮಾರ್ ಸಿಂಗ್ ಕರೆ ಮಾಡಿದಾಗ ನಾನೂ ಕೂಡಾ ರಾಜೇಶ್ ಜೊತೆಗಿದ್ದೆ. ಸೀಮಂತ್ ಮಾತುಗಳನ್ನು ರಾಜೇಶ್ ಲೌಡ್ ಸ್ಪೀಕರ್ ಇಟ್ಟು ನನಗೆ ಕೇಳಿಸುತ್ತಿದ್ದ. “ನವೀನ ನ್ಯೂಸ್ ಯಾಕೆ ಮಾಡಬೇಕಿತ್ತು. ಅವನಿಗೆ ಅಕ್ಕ ತಂಗಿ ಇಲ್ಲವಾ ? ಅವರಿಗೆ ಹೊಡೆಯಲ್ವ ? ಅದನ್ನು ಟಿವಿಯಲ್ಲಿ ತೋರಿಸ್ತಾರಾ ? ನೋಡ್ಕೋತೀನಿ ನಾನು ಅವನನ್ನು. ಅವನು ಮಂಗಳೂರಿನಲ್ಲಿ ತಾಲೀಬಾನ್ ಸಂಸ್ಕೃತಿ ಇದೆ ಎಂದು ಹೇಳಿದ. ಅಸ್ಸಾಂನ ಘಟನೆಗೆ ಈ ಘಟನೆಯನ್ನು ಹೋಲಿಸಿ ಲೈವ್ ಕೊಟ್ಟ. ಈ ಬಾರಿ ಅವನನ್ನು ಬಿಡುವುದಿಲ್ಲ. ಈ ಕೇಸ್ನಲ್ಲಿ ಅವನನ್ನು ಫಿಕ್ಸ್ ಮಾಡುತ್ತೇನೆ. ಅವನಿಗೆ ಎಷ್ಟು ಬೇಕಾದರೂ ಇಂಪ್ಲ್ಯೂಯನ್ಸ್ ಇರಲಿ. ಫಿಕ್ಸ್ ಮಾಡುವುದು ಮಾಡೋದೆ” ಎಂದು ಸೀಮಂತ್ ಹೇಳುತ್ತಿದ್ದರು. “ಹುಡುಗಿಯರಿಗೆ ಮತ್ತು ಹುಡುಗರಿಗೆ ಹೊಡೆದಿದ್ದು ದೊಡ್ಡ ವಿಷಯ ಅಲ್ಲ. ಅದನ್ನು ಚಿತ್ರೀಕರಿಸಿದ್ದು ಮಹಾ ಅಪರಾಧ ಎಂಬುದಷ್ಟೇ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತಿನ ಅರ್ಥ ಎಂಬುದಂತೂ ಸ್ಪಷ್ಟ.
ಇಂದು ಬೆಳಿಗ್ಗೆ ನನಗೆ ಇನ್ನೊಂದು ಶಾಕ್ ಕಾದಿತ್ತು. ನಾನು ಯಾರ ಪರವಾಗಿ ಸುದ್ದಿ ಮಾಡಿದ್ದೇನೋ ಅವರೇ ನನ್ನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಹಲ್ಲೆಗೊಳಗಾದ ಯಾವುದೇ ಹುಡುಗ ಹುಡುಗಿ ಸ್ವ ಇಚ್ಚೆಯಿಂದ ನನ್ನ ವಿರುದ್ಧ ದೂರು ನೀಡಲು ಸಾದ್ಯವಿಲ್ಲ. ಪ್ಲೀಸ್ ಹೊಡಿಯಬೇಡಿ ಎಂದು ನಾನು ಸಾಧ್ಯವಾದಷ್ಟು ಬೊಬ್ಬೆ ಹಾಕುತ್ತಿದ್ದದ್ದು ಹಲ್ಲೆಗೊಳಗಾದ ಯುವತಿಯರಿಗೆ ಗೊತ್ತಿತ್ತು ಅಂದುಕೊಳ್ಳುತ್ತೇನೆ. ಸಂಜೆಯಾಗುವಾಗ ನನ್ನ ಡೌಟ್ ಕ್ಲೀಯರ್ ಆಗಿತ್ತು. ಮಾಧ್ಯಮದ ಜೊತೆ ಮಾತನಾಡಿದ ಹಲ್ಲೆಗೊಳಗಾದ ಯುವಕರು “ನಾವು ಮಾಧ್ಯಮ ಮಂದಿ ವಿರುದ್ಧ ದೂರು ನೀಡಿಲ್ಲ. ನಮಗೆ ಮಾಧ್ಯಮದವರು ಸಪೋಟರ್್ ಮಾಡಿದ್ದಾರೆ” ಎಂದರು.
ಅದೇನೇ ಇರಲಿ. ಮಂಗಳೂರು ಗ್ರಾಮಾಂತರ ಪೊಲೀಸರು ನನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನಾವು ಚಿತ್ರೀಕರಿಸಿದ ವಿಝುವಲ್ಸ್ ಆಧಾರದಲ್ಲೇ ಈವರೆಗೆ 8 ಮಂದಿ ದಾಳಿಕೋರರನ್ನು ಬಂಧಿಸಿದ್ದಾರೆ. ನಾವು ಒಂದು ಆಕ್ಷೇಪಾರ್ಹ ಘಟನೆಯನ್ನು ಚಿತ್ರೀಕರಿಸಿ ಸುದ್ದಿ ಪ್ರಸಾರ ಮಾಡಿದ್ದೇವೆಯೇ ಹೊರತು ಆಕ್ಷೇಪಾರ್ಹ ದೃಶ್ಯವನ್ನಲ್ಲ ಎಂಬುದು ನನಗೆ ಸ್ಪಷ್ಟತೆ ಇದೆ. ಮಂಗಳೂರಿನಲ್ಲಿ ಜುಲೈ 28 ರಾತ್ರಿ ನಡೆದ ದಾಳಿ ಹೊಸದೇನೂ ಅಲ್ಲ. ಪ್ರತೀ ವಾರಕ್ಕೊಂದು ಇಂತಹ ಘಟನೆ ನಡೆಯುತ್ತದೆ. ಮುಸ್ಲಿಂ ಹುಡುಗ ಹಿಂದೂ ಹುಡುಗಿ ಒಟ್ಟಿಗಿದ್ದರೆ ಹಿಂದೂ ಮತೀಯವಾದಿಗಳು ಅವರಿಗೆ ಹಲ್ಲೆ ಮಾಡಿ ಮತೀಯವಾದಿಗಳೇ ಅವರನ್ನು ಠಾಣೆಗೆ ಕೊಂಡೊಯ್ದು ಪೊಲೀಸರ ವಶಕ್ಕೆ ನೀಡುತ್ತಾರೆ. ಪೊಲೀಸರು ಪ್ರೇಮಿ(ಗೆಳೆಯರು)ಗಳ ತಂದೆ ತಾಯಿಯನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ನಾವು ಶೂಟಿಂಗ್ ಮಾಡದೇ ಇದ್ದರೆ ಇಲ್ಲೂ ಅಷ್ಟೇ ನಡೆಯುತ್ತಿತ್ತು. ನಮ್ಮ ಶೂಟಿಂಗ್ನಿಂದ ಕೋಮುವಾದಿಗಳ ಒಂದು ಕ್ರೂರ ಮುಖ ಬಯಲಾಗಿದೆ ಮತ್ತು ಎಂಟು ಮಂದಿ ಬಂಧಿತರಾಗುವಂತೆ ಮಾಡಿದೆ. ಯಾರು ಏನೇ ಅನ್ನಲ್ಲಿ. ಯಾವ ಕೇಸೇ ಬೀಳಲಿ. ನಾನು ಪತ್ರಕರ್ತನಾಗಿ ಸಮಾಜಕ್ಕೆ ಏನೋ ನ್ಯಾಯ ನೀಡಿದ್ದೇನೆ ಅನ್ನಿಸುತ್ತಿದೆ. ಅಳುತ್ತಿರುವ ನನ್ನ ಮನಸ್ಸಿಗೆ ಸಧ್ಯ ಅಂತಹ ಸಮಾಧಾನ ಸಾಕು.
ನನ್ನ ಮೇಲೆ ದೂರು ನೀಡಿರುವುದು ಮತ್ತು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದು ದೊಡ್ಡ ವಿಷಯವೇ ಅಲ್ಲ. ನನ್ನ ಮೇಲಿನ ಎಫ್ಐಆರ್ನಿಂದ ದಾಳಿಕೋರ ಕ್ರೂರಿ ಮೃಗಗಳಿಗೆ ಶಿಕ್ಷೆಯಾಗುವುದಾದರೆ ನನ್ನ ಮೇಲಿನ ಎಫ್ಐಆರನ್ನು ನಾನು ಖುಷಿ ಪಡುತ್ತೇನೆ. ಯಾವುದಾದರೂ ಒತ್ತಡಕ್ಕೆ ಮಣಿದು ಆರೋಪದಿಂದ ನನ್ನನ್ನು ಬಿಡುಗಡೆ ಮಾಡುವಾಗ ಅಂತಹ ಬಿಡುಗಡೆಯಿಂದ ಆರೋಪಿ ದಾಳಿಕೋರರಿಗೆ ಲಾಭವಾಗುವುದಾದರೆ ಆಂತಹ ಬಿಡುಗಡೆ ನನಗೆ ಬೇಕಾಗಿಲ್ಲ. ನನ್ನ ಸಮ್ಮುಖದಲ್ಲೇ ನನ್ನ ಸಹೋದರಿಯರ ಮೇಲೆ ದಾಳಿ ನಡೆಸಿದ ದಾಳಿಕೋರರಿಗೆ ನ್ಯಾಯಾಲಯ ಅದೆಂತಹ ಶಿಕ್ಷೆ ನೀಡಿದರೂ ನ್ಯಾಯ ನೀಡಿದಂತಾಗುವುದಿಲ್ಲ. ಆದರೂ ಅವರಿಗೆ ಶಿಕ್ಷೆಯಾಗಬೇಕು.
——————————————————
ಇನ್ನಷ್ಟೂ ಬರೆಯಲು ಇದೆ. ಬರೆಯಲು ಸಮಯ ಸಾಕಾಗಿಲ್ಲ. ಯಾವುದೇ ವ್ಯಕ್ತಿ ಯಾ ಸಂಘಟನೆಗೆ ಈ ದಾಳಿ ವಿರುದ್ದ ಹೋರಾಟ ಮಾಡುವುದಾದರೆ ಇನ್ನಷ್ಟೂ ಮಾಹಿತಿ ಬೇಕಾಗಿದ್ದಲ್ಲಿ ಅಥವಾ ಯಾವುದೇ ತನಿಖಾ ಸಂಸ್ಥೆಗೆ ಮಾಹಿತಿ ಬೇಕಾದ್ದಲ್ಲಿ ಯಾವುದೇ ಅವಧಿಯಲ್ಲಿ ನನ್ನನ್ನು ಸಂಪರ್ಕಿಸಬಹುದು .
ನನ್ನ ವಿಳಾಸ :
ನವೀನ್ ಸೂರಿಂಜೆ
ಪತ್ರಕರ್ತ
ಕಸ್ತೂರಿ ನ್ಯೂಸ್ 24
ಮಂಗಳೂರು
ಮೊಬೈಲ್ : 9972570044, 8971987904

Saturday 23 June 2012

ಅಮ್ಮಾ.... ನಾನು ಕದ್ದಿಲ್ಲ



ತಾಯಿ ಮತ್ತು ಮಕ್ಕಳ ನಡುವಿನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿಯ ಹಲವು ರೂಪಗಳು ಕಪಟವಾಗಿದ್ದರೂ ಈ ಪ್ರೀತಿಯು ನಿಷ್ಕಳಂಕವಾಗಿರುತ್ತದೆ. ಮಕ್ಕಳಿಗೆ ನಾನಾ ಕಾರಣಗಳಿಂದ ತಾಯಿಯೊಂದಿಗೆ ಪ್ರೀತಿ ಕಡಿಮೆಯಾದರೂ ತಾಯಿಗೆ ಮಾತ್ರ ಮಕ್ಕಳೊಂದಿಗೆ ಪ್ರೀತಿ ಹೆಚ್ಚಾಗುತ್ತಿರುತ್ತದೆ. ಅದು ಜೀವನದ ಕೊನೆಯವರೆಗೂ ಹಾಗೇ ಮುಂದುವರಿಯುತ್ತದೆ. ತಾಯಿಯು ಮಕ್ಕಳಿಗೋಸ್ಕರ ಸಿಕ್ಕಾಪಟ್ಟೆ ಕಷ್ಟ ಅನುಭವಿಸುತ್ತಾಳೆ. ತಾಯಿಯ ಪ್ರಾರ್ಥನೆಯ ವಸ್ತುವಾಗಿ ಯಾವಾಗಲೂ ಮಕ್ಕಳು ಸ್ಥಾನ ಪಡೆದಿರುತ್ತಾರೆ. ಇಂದು ನಾವು ಹೊರಗಡೆ ಹೋಗಿ ಅಥವಾ ಯಾವುದಾದರೂ ವಾಹನದಲ್ಲಿ ಸುತ್ತಾಡಿ ಸುರಕ್ಷಿತವಾಗಿ ಮನೆಗೆ ತಲುಪುವುದಿದ್ದರೆ ಅದು ತಾಯಿಯ ಪ್ರಾರ್ಥನೆಯ ಫಲ ಎಂದೇ ನಾನು ನಂಬುತ್ತೇನೆ. ಯಾಕೆಂದರೆ ಅವಳ ಪ್ರಾರ್ಥನೆಯಲ್ಲಿ ಸ್ವಾರ್ಥ ಇರುವುದಿಲ್ಲ. ಮಕ್ಕಳಿಗಾಗಿ ಮಿಡಿಯುವ ಹೃದಯದಿಂದ ಹೊರಡುವ ಪ್ರಾರ್ಥನೆಯು ತೀಕ್ಷ್ಣವಾಗಿರುತ್ತದೆ. 
ಮಕ್ಕಳು ಸಂಕಷ್ಟ ಅನುಭವಿಸುವಾಗ ಅವರಿಗೆ ನೆನಪಾಗುವುದು ತಾಯಿಯದ್ದಾಗಿದೆ. ತಾಯಿಯ ಸಾಂತ್ವನದ ನುಡಿಗಳು ಅವರ ಅರ್ಧ ಸಂಕಷ್ಟವನ್ನು ದೂರ ಮಾಡುತ್ತವೆ. ಈ ಘಟನೆಯನ್ನೊಮ್ಮೆ ಓದಿ ನೋಡಿ.  ಒಂದು ವರ್ಷದ ಹಿಂದೆ ನಡೆದ ಘಟನೆ. ಗೆಳೆಯರೊಂದಿಗೆ ಗೋವಾಕ್ಕೆ ಹೋಗಿ ಮರಳುವಾಗ ನಡೆದ ಕಣ್ಣೀರಿನ ಕಥೆಯಿದು. ಗೋವಾದಿಂದ ಕಲ್ಲಿಕೋಟೆಗಿರುವ ಟ್ರೈನ್ ನಿಮಿಷಗಳ ವ್ಯತ್ಯಾಸದಿಂದ ತಪ್ಪಿ ಹೋಯಿತು. ಮನೆಗೆ ಬೇಗನೇ ತಲುಪಬೇಕು ಎಂಬ ತವಕದಿಂದ ವೊದಲು ಬಂದ ಮಂಗಳೂರು ಕಡೆಗಿರುವ ಗಾಡಿ ಹತ್ತಿ ಮಂಗಳೂರು ತಲುಪಿದೆವು. ಆಗ ರಾತ್ರಿ 11ರ ಸಮಯ. ಜನ ಸಂದಣಿ ಅಷ್ಟೇನೂ ಇರಲಿಲ್ಲ. ಕಲ್ಲಿಕೋಟೆಗಿರುವ ಟ್ರೈನಿನ ಕುರಿತು ಅಲ್ಲಿ ವಿಚಾರಿಸಿದಾಗ, ಮುಂಜಾನೆ 6 ಗಂಟೆಗೆ ಎಂಬ ಕಳವಳಕಾರಿ ಉತ್ತರ ಸಿಕ್ಕಿತು. ನಾವು ಸ್ಟೇಶನಿನಲ್ಲಿ ನಿಂತು, ಕುಳಿತು, ನಡೆದು, ಲ್ಯಾಪ್ಟಾಪಿನಲ್ಲಿ ಗೇಮ್ ಆಡಿ ಸಮಯ ಕಳೆದೆವು. ರಾತ್ರಿ ಮೂರು ಗಂಟೆಯ ಸಮಯ....
ವಿಶ್ರಾಂತಿ ಕೊಠಡಿಯ ಕುರ್ಚಿಯೊಂದರಲ್ಲಿ ನಿದ್ರೆಗೆ ಜಾರಿದ ನಾನು ಮಹಿಳೆಯೋರ್ವಳ ಕಿರುಚಾಟದಿಂದ ಥಟ್ಟನೆ ಎಚ್ಚೆತ್ತುಕೊಂಡೆ. 'ದೇವರೇ ನನ್ನ ಸರ ಕಾಣುತ್ತಿಲ್ಲ' ಎಂದು ಅವಳು ಬೊಬ್ಬೆ ಹೂಡೆಯುತ್ತಿದ್ದಳು. ಏನು ಎಂದು ತಿಳಿಯದೆ ಸೇರಿದ್ದ  ಜನರ  ಗುಂಪಿನ ಕಡೆಗೆ ನಾನು ಓಟಕ್ಕಿತ್ತೆ. ಅಲ್ಲಿ ಸೇರಿದ್ದ ಜನರ ಮಾತಿನಲ್ಲಿ ಸರ ಕಳ್ಳತನ ನಡೆದಿದೆ ಎಂದು ತಿಳಿಯಿತು. ಅವರು ಯಾವುದೋ ತೀರ್ಥಕ್ಷೇತ್ರಕ್ಕೆ ಹೋಗಿ ಮರಳುವವರಾಗಿದ್ದರು. ಈ ಮಹಿಳೆ ಅಳು ನಿಲ್ಲಿಸಲಿಲ್ಲ. ಪತಿಯು ಅತ್ತಿತ್ತ ನಡೆಯುತ್ತಾ ಯಾರ್ಯಾರನ್ನೋ ನೋಡುತ್ತಿದ್ದಾನೆ. ಓರ್ವ ಕಪು ಅಂಗಿ ಧರಿಸಿದ ಕಳ್ಳನ ಮುಖಭಾವ ಹೊದಿದ್ದ ಒಬ್ಬ ಹೂಡುಗನು ಅತ್ತಿತ್ತ ಅಲೆಯುತ್ತಿದ್ದುದನ್ನು ನಾನು ನೋಡಿದ್ದೇನೆ ಎಂದು ಗುಂಪಿನಲ್ಲಿದ್ದ ಯಾರೋ ಹೇಳಿದರು. ಅಂತಹ ಚಹರೆ ಹೊಂದಿದ ಹುಡುಗನನ್ನು ಹುಡುಕುತ್ತಾ ಎಲ್ಲರ ಕಣ್ಣುಗಳೂ ಅತ್ತಿತ್ತ ಹರಿದಾಡಿದವು. ಆದರೆ ಫಲಿತಾಂಶ ಶೂನ್ಯ.
ಸಮಯವು ಮುಂದೆ ಸಾಗುತ್ತಿತ್ತು.....
ನಾನು ಮತ್ತು ಗೆಳೆಯ ಕುಳಿತು ಲ್ಯಾಪ್ಟಾಪಿನಲ್ಲಿ  ಸೀಡಿ ನೋಡುತ್ತಿದ್ದೆವು. ಆಗ ನನ್ನ ಬಳಿ ಕುಳಿತಿದ್ದ ಓರ್ವ ವ್ಯಕ್ತಿಯು ನನ್ನನ್ನು ಕರೆಯುತ್ತಾ ಹೇಳಿದನು. 'ಇಲ್ಲಿ ಕುಳಿತಿದ್ದದ್ದು ಆ ಹುಡುಗ ಅಂತ ಕಾಣುತ್ತೆ. ವಿಚಾರಿಸಿ.' ನಾನು ನೋಡಿದೆ.   ಕಪ್ಪು ಅಂಗಿ ಧರಿಸಿದ ಒಬ್ಬ ಹುಡುಗ ನಡೆದುಕೊಂಡು ಹೋಗುತ್ತಿದ್ದನು. ತಡ ಮಾಡದೆ ಆ ಮಹಿಳೆಯ ಗಂಡನಿಗೆ ಮಾಹಿತಿ ನೀಡಿದೆ. ಇದನ್ನು ಕೇಳಿದ್ದೇ ತಡ ಅವನು ಹುಡುಗನನ್ನು ಹಿಡಿಯಲು ಹೊರಗೋಡಿದನು. ಅವನೊಂದಿಗೆ ಹಲವರು ಸೇರಿಕೊಂಡರು. ಲ್ಯಾಪ್ಟಾಪನ್ನು ಮಡಚಿ ನಾನೂ ಕೂಡಾ ಎಲ್ಲರಂತೆ ಓಡಿದೆ. ಆಗಲೇ ಅವರು ಆ ಹುಡುಗನನ್ನು ಹಿಡಿದಾಗಿತ್ತು. ನಾನು ಹುಡುಗನನ್ನೇ ನೋಡಿದೆ. 20ರ ಹರೆಯ ಇರಬಹುದು. ಬಿಳಿ ಮೈ ಬಣ್ಣ, ಅವನು ವಿಪರೀತ ಬೆವರಿದ್ದನು.
'ನೀನಲ್ಲವೇ ಇಲ್ಲಿ ಬಂದು ಸರ ಕದ್ದದ್ದು' ಜನರು ನಾಲ್ಕು ಭಾಗಗಳಿಂದಲೂ ಅವನನ್ನು ಎಳೆದಾಡುತ್ತಾ ಅವನನ್ನು ವಿಚಾರಿಸಿದರು. 'ಇಲ್ಲ, ನಾನು ಕದ್ದಿಲ್ಲ, ನಾನು ಈಗ ಇಲ್ಲಿಗೆ ಬರುತ್ತಿದ್ದೇನಷ್ಟೇ' ಕಣ್ಣೀರು ಸುರಿಸುತ್ತಾ ಅವನು ಹೇಳಿದನು. 'ಸುಳ್ಳು ಹೇಳುತ್ತಿದ್ದೀಯಾ ನನ್ಮಗನೇ' ಎಂದು ಆ ಮಹಿಳೆಯ ಗಂಡ  ಅವನ ಮುಖಕ್ಕೊಂದು ಏಟು ನೀಡಿದನು. ಇದನ್ನು ಕಂಡದ್ದೇ ತಡ ಇತರರೂ ಕೂಡಾ ತಮ್ಮ ಕೈಲಾದುದನ್ನು ನೀಡಿದರು. ಪ್ರತೀ ಒದೆ ಬೀಳುವಾಗಲೂ 'ನಾನು ಕದ್ದಿಲ್ಲ... ದೇವರಾಣೆಗೂ ನಾನು ಕದ್ದಿಲ್ಲ... ನನ್ನನ್ನು  ಹೊಡೆಯಬೇಡಿ' ಎಂದು ಬೇಡುತ್ತಿದ್ದನು. ಜನರಿಗೆ ಅವನ ಕೂಗು ಕೇಳಿಸಲೇ ಇಲ್ಲ. ಏಟು ಜೋರಾಗಿ ಬೀಳ ತೊಡಗಿದಾಗ ಅವನು ಓಡುವ ವಿಫಲ ಪ್ರಯತ್ನ ನಡೆಸಿದನು. ಇದರಿಂದಾಗಿ ಏಟಿನ ವೇಗವು ಹೆಚ್ಚತೊಡಗಿ ಅವನ ಬಾಯಿಯಿಂದ ರಕ್ತ ಒಸರತೊಡಗಿತು. ಆಗಲೂ ಅವನು 'ನಾನು ಕದ್ದಿಲ್ಲ... ನನ್ನ ತಾಯಿಯಾಣೆ ನಾನು ಕದ್ದಿಲ್ಲ' ಎಂದು ಅಳುತ್ತಿದ್ದನು. ಇದನ್ನೆಲ್ಲಾ ನೋಡುತ್ತಿದ್ದ ನಾನು ಕೇವಲ ಮೂಕ ಪ್ರೇಕ್ಷಕನಾದೆ.
ಯಾರೋ ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ರೈಲ್ವೇ ಪೋಲೀಸರ ಆಗಮನವಾಯಿತು. ಜನರು ಸರಿದು ದಾರಿ ಮಾಡಿಕೊಟ್ಟರು. ಪೂಲೀಸರು ಅವನೊಂದಿಗೆ ವಿಚಾರಿಸಿದಾಗಲೂ ಅವನು 'ಸಾರ್ ನಾನು ಕದ್ದಿಲ್ಲ. ಈಗಷ್ಟೇ ನಾನು ಈ ದಾರಿಯಾಗಿ ಬಂದದ್ದು' ಎಂದು ಉತ್ತರಿಸಿದನು.
'ನೀನು ಎತ್ತ ಹೋಗುವುದಕ್ಕಾಗಿ ಇತ್ತ ಬಂದೆ' ಪೋಲೀಸಿನವನು ಕೇಳಿದನು.
'ಸಾರ್, ನಾನು ಈ ಮಾರ್ಕೆಟಿನಲ್ಲಿ ತರಕಾರಿಯ ಲಾರಿಯಿಂದ ತರಕಾರಿ ಇಳಿಸಿ ರೂಮಿಗೆ ಹೋಗುವಾಗ ಚಾ ಸೇವಿಸಲು ಈ ದಾರಿಯಾಗಿ ಬಂದೆ... ನನ್ನ ಕೊಠಡಿ ಅಲ್ಲಿದೆ' ಎಂದು ದೂರದಲ್ಲಿದ್ದ ಕಟ್ಟಡದ ಕಡೆಗೆ ಬೆರಳು ತೋರಿಸುತ್ತಾ ಹೇಳಿದನು.
'ಚಹಾ ಕುಡಿಯಲು ಬಂದದ್ದಂತೆ' ಎಂದು ಆರ್ಭಟಿಸುತ್ತಾ ಆ ಮಹಿಳೆಯ ಗಂಡ ಅವನ ತಲೆಗೆ ಬಲವಾಗಿ ಹೊಡೆದನು. ಅವನು ಏಟು ತಾಳಲಾರದೆ ಕೆಳಗೆ ಕುಸಿದನು.
ಪೋಲೀಸರು ಆ ಹುಡುಗನನ್ನು ವಿಚಾರಣೆಗೆ ಒಳಪಡಿಸಿದರು.... ಅವನ ಮನೆ ಕಾಸರಗೋಡಿನಲ್ಲಿ. ಕಳೆದ ಎರಡು ತಿಂಗಳಿನಿಂದ ಸಮೀಪದ ಅಂಗಡಿಗಳಿಗೆ ಬರುವ ತರಕಾರಿಗಳನ್ನು ಲಾರಿಯಿಂದ ಇಳಿಸುವ ಕೆಲಸ ಮಾಡುತ್ತಿದ್ದಾನೆ. ಮನೆಯಲ್ಲಿರುವ ತಾಯಿ ಮತ್ತು ತಂಗಿಯನ್ನು ಸಾಕಲಿಕ್ಕಾಗಿ ಈ ಕೆಲಸಕ್ಕೆ ಸೇರಿದ್ದಾನೆ. ಇವಿಷ್ಟು ವಿಚಾರಣೆಯಿಂದ ತಿಳಿದು ಬಂದ ವಿಚಾರಗಳು. ಬಳಿಕ ಪೋಲೀಸಿನವನು ಹೇಳಿದನು. 'ನೀನು ಸರ ಕದ್ದಿದ್ದರೆ ಅದನ್ನು ಮರಳಿಸು. ಸುಮ್ಮನೆ ಯಾಕೆ ಒದೆ ತಿನ್ನುತ್ತೀ'
'ನಾನು ಕದ್ದಿಲ್ಲ ಸಾರ್. ದೇವರಾಣೆಗೂ ನಾನು ಕದ್ದಿಲ್ಲ' ಅವನು ಕಣ್ಣೀರು ಸುರಿಸುತ್ತಾ ಕೈ ಮುಗಿದು ಬೇಡಿಕೊಂಡನು.
'ಇವನು ಕದಿಯುವುದನ್ನು ನೋಡಿದವರಿದ್ದಾರೆಯೇ' ಪೋಲೀಸರು ಕೇಳಿದರು. 'ಇವನು ಇಲ್ಲಿ ಸುತ್ತಾಡುತ್ತಿರುವುದನ್ನು ಒಬ್ಬನು ನೋಡಿದ್ದಾನೆ' ಎಂದು ಹೇಳುತ್ತಾ ಆ ಮಹಿಳೆ ಮತ್ತು ಆಕೆಯ ಗಂಡ ಪೋಲೀಸರೊಂದಿಗೆ ವಿಶ್ರಾಂತಿ ಕೊಠಡಿಯ ಕಡೆಗೆ ಹೆಜ್ಜೆ ಹಾಕಿದರು. ಆ ಹುಡುಗನನ್ನು ನೋಡಿದವನು ಅಲ್ಲೆಲ್ಲೂ ಕಾಣಲಿಲ್ಲ. 'ಎಲ್ಲಿ ಅವನು' ಪೋಲೀಸರು ಕೇಳಿದರು. 'ಲ್ಯಾಪ್ಟಾಪ್ ಬಿಡಿಸಿ ಕುಳಿತ ಒಬ್ಬ ಯುವಕನೂ ನೋಡಿದ್ದಾನೆ' ಯಾರೋ ಹೇಳಿದರು. ಅವನು ಹೇಳಿದ್ದು ನನ್ನ ಕುರಿತಾಗಿತ್ತು. 'ನಾನು ಕಂಡಿಲ್ಲ. ಇವನು ಹೇಳಿದ್ದನ್ನು ಅವರಿಗೆ ತಿಳಿಸಿದ್ದೇನಷ್ಟೇ' ಎಂದು ಹೇಳಲು ಮುಂದಾದೆ.
ಅವನು ಕದ್ದಿದ್ದಾನೆಯೇ ಎಂದು ನನಗೆ ಹೇಳಲು ಅಸಾಧ್ಯ. ಯಾಕೆಂದರೆ ಅವನು ತೆಗೆಯುವುದನ್ನು ನಾನು ನೋಡಿಲ್ಲ. ಈಗ ನನಗೆ ಏನೂ ಹೇಳಲಾಗದ ಸ್ಥಿತಿ. ಈ ಜನರ ಗುಂಪಿನ ಮಧ್ಯೆ ನಾನು ಮೌನಿಯಾದೆ. ಕದ್ದವನು ಸಿಗದಿದ್ದರೆ ಸಿಕ್ಕಿದವನನ್ನು ಕಳ್ಳನಾಗಿಸುವ ಕಾಲವಲ್ಲವೇ ಇದು!!
ಇವನು ಕದಿಯುವುದನ್ನು ನಾನು ನೋಡಿಲ್ಲ..... ಎಂದು ಹೇಳಲು ಮುಂದಾದಾಗ, ಆ ಮಹಿಳೆಯ ಗಂಡನು ಮತ್ತೊಮ್ಮೆ ತನ್ನ ಅಭಿಪ್ರಾಯವನ್ನು ಘೋಷಿಸಿದನು. 'ಇವನಿಗೆ ಇನ್ನೆರಡು ಬಿಗಿದರೆ ಬಾಯಿ ಬಿಡ್ತಾನೆ ಸಾರ್' ಇದನ್ನು ಕೇಳಿದ್ದೇ ತಡ ಅವನು ಪೋಲೀಸರ ಕೈಯಿಂದ ತಪ್ಪಿಸಿ ಓಡಿದನು. ಜನರೂ ಅವನ ಹಿಂದೆ ಓಡಿದರು. ನಾವು ಅಲ್ಲಿಯೇ ನಿಂತೆವು. ಅವನು ಓಡಿದ ಕಾರಣಕ್ಕಾಗಿ ಎಲ್ಲರೂ ಅವನನ್ನು ಕಳ್ಳನೆಂಬ ಪಟ್ಟ ಕಟ್ಟಿ ಬಿಟ್ಟರು. ನನಗೆ ಅವನ ಕಣ್ಣೀರೇ ಕಣ್ಮುಂದೆ ಬರುತ್ತಿತ್ತು. 'ನಾನು ಕದ್ದಿಲ್ಲ' ಎಂಬ ರೋಧನವು ನನ್ನ ಕಿವಿಯಲ್ಲಿ ಮಾರ್ದನಿಸುತ್ತಿತ್ತು.
ಮುಂಜಾನೆ 5.30ರ ಸಮಯ....
ನಾವು ಹೋಗಬೇಕಾದ ಕಲ್ಲಿಕೋಟೆ ಟ್ರೈನ್ ಬಂತು. ನಾವು  ಟ್ರೈನ್  ಹತ್ತಿ ಕುಳಿತು ನಾನು ನೀರಿಗಾಗಿ ಬಾಟಲಿ ಹಿಡಿದು ಹೊರಟೆ. ಸ್ವಲ್ಪ ಮುಂದೆ ಸಾಗಿದಾಗ, ಕತ್ತಲೆ ತುಂಬಿದ ಜಾಗವೊಂದರಿಂದ ಕ್ಷೀಣ ಅಳುವೊಂದು ಕೇಳಿಸಿತು. ನಾನು ಮೆಲ್ಲನೆ ಮುಂದೆ ಸಾಗಿದೆ. ಅದು ಅವನು.... ಜನರ ಮುಂದೆ ಕಳ್ಳನಾದವನು... ಅವನು ಅಳುತ್ತಾ ವೊಬೈಲಿನ ಲ್ಲಿ ಯಾರಿಗೋ ಕಾಲ್  ಮಾಡುತ್ತಿದ್ದಾನೆ. ನಾನು ಅವನ ಮಾತನ್ನು ಆಲಿಸಿದೆ.
'ಹಲೋ, ಅಮ್ಮಾ.... ಇದು ನಾನು' ಅವನು ಬಿಕ್ಕಳಿಸುತ್ತಾ ಹೇಳಿದನು.
'ಅಮ್ಮಾ.... ನಾನು ಕೆಲಸ ಮುಗಿಸಿ ಮರಳುವಾಗ ರೈಲ್ವೇ ಸ್ಟೇಶನಿನಲ್ಲಿ ಎಲ್ಲರೂ ನನ್ನನ್ನು ಹಿಡಿದು ಕಳ್ಳನಾಗಿಸಿದರು' ಅವನ ಸ್ವರ ಗದ್ಗದಿತವಾಯಿತು.
'ಅಮ್ಮಾ... ನಾನು ಕದ್ದಿಲ್ಲ. ಎಲ್ಲರೂ ಸೇರಿ ನನಗೆ ಹೊಡೆದರು. ಅಮ್ಮಾ... ನನ್ನ ಬಾಯಿಂದ ರಕ್ತ ಬರುತ್ತಿದೆ' ಅವನು ಅಳತೊಡಗಿದನು.
'ನನಗೆ ಜೀವಿಸುವ ಆಸೆಯೇ ಹೊರಟು ಹೋಗಿದೆ ಅಮ್ಮಾ. ಅವರೊಂದಿಗೆ ನಾನು ವಾಸವಿರುವ ಸ್ಥಳದ ಕುರಿತು ಹೇಳಿದ್ದೇನೆ. ಅವರು ನನ್ನನ್ನು ಹುಡುಕುತ್ತಾ ಅಲ್ಲಿಗೆ ಬರುವರು. ನಾನು ಕಳ್ಳನಲ್ಲ. ಅಮ್ಮಾ... ನೀನಾದರೂ ನನ್ನನ್ನು ನಂಬು. ನಾನು ಏನನ್ನೂ ಕದ್ದಿಲ್ಲ ಅಮ್ಮಾ....' ಅವನ ಕಣ್ಣಿನಿಂದ ಕಣ್ಣೀರು ಧಾರೆ ಧಾರೆಯಾಗಿ ಇಳಿಯತೊಡಗಿತು. ಇದನ್ನು ಕಂಡ ನನ್ನ ಕಣ್ಣುಗಳಿಗೆ ಸುಮ್ಮನಿರಲಾಗಲಿಲ್ಲ. ನಾನು ಕೂಡಾ ಅತ್ತೆ. ಅವನ ಒಂದೊಂದು ಮಾತೂ ನನ್ನ ಹೃದಯಕ್ಕೆ ಭರ್ಚಿಯಂತೆ ತಿವಿಯುತ್ತಿತ್ತು. ಯಾರೂ ಅವನನ್ನು ನಂಬದ ಸ್ಥಿತಿಯಲ್ಲಿ ಸಮಯವನ್ನು ಲೆಕ್ಕಿಸದೆ ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ತಾಯಿಗೆ ಫೊನ್ ಮಾಡಿ ತಾಯಿಯನ್ನು ನಂಬಿಸುತ್ತಿದ್ದನು. ಎಂಥಾ ಹೃದಯ ವಿದ್ರಾವಕ ಸನ್ನಿವೇಶ!!
ಅಲ್ಲ, ಅವನು ಕಳ್ಳನಲ್ಲ..... ನನ್ನ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ಟ್ರೈನ್ ಹೊರಡಲು ಪ್ರಾರಂಭಿಸಿತು. ನಾನು ಓಡಿ ಹೋಗಿ ಟ್ರೈನ್ ಹತ್ತಿದೆ. ನೀರು ತೆಗೆಯುವುದನ್ನೂ ಮರೆತಿದ್ದೆ. ಅವನಿದ್ದ ಕಡೆಗೆ ನಾನು ನೋಡಿದೆ. ಅವನು ಕಾಣುತ್ತಿಲ್ಲ. ರೈಲು ಮುಂದೆ ಮುಂದೆ ಸಾಗುತ್ತಿದೆ... ಮೂರು ದಿನಗಳ ನಿದ್ದೆ ಹಾಗೂ ಪ್ರವಾಸದ ಆಯಾಸವು ನನ್ನಿಂದ ಮಾಯವಾಗಿತ್ತು. ನಿದ್ರಿಸಬೇಕು ಎಂದು ಕಣ್ಣು ಮುಚ್ಚಿದಾಗ ನನ್ನ ಮನಸ್ಸಿಗೆ ಬರುತ್ತಿದ್ದುದು ಸರ ಕಳೆದುಕೊಂಡ ಆ ಮಹಿಳೆಯ ರೋದನವಲ್ಲ, ಕಳ್ಳನೆಂದು ಜನರಿಂದ ಒದೆ ತಿಂದ ಆ ಹುಡುಗನ ಸ್ಥಿತಿಯಂತೂ ಅಲ್ಲ. ಬದಲಾಗಿ ವೇಳೆಯಲ್ಲದ ವೇಳೆಯಲ್ಲಿ ಮಗನ ಕರೆಗೆ ಓಗೊಟ್ಟ ಆ ವಾತ್ಸಲ್ಯಮಯಿ ತಾಯಿ. ಮಗನನ್ನು ಜನರು ಅಟ್ಟಾಡಿಸಿ ಹೊಡೆದದ್ದನ್ನು , ಮಗನ ಬಾಯಿಂದ ಬಂದ ರಕ್ತವನ್ನು ನೆನೆದು ಮಿಡಿಯುವ ಆ ಮಾತೃ ಹೃದಯ. 'ನನಗೆ ಜೀವಿಸುವ ಆಸೆಯೇ ಹೊರಟು ಹೋಗಿದೆ' ಎಂದು ಮಗನು ಹೇಳುವಾಗ ಆ ತಾಯಿಯ ಪ್ರತಿಕ್ರಿಯೆಯು ಏನಾಗಿರಬಹುದು. ಅವಳು ರೋದಿಸಿರಲಾರಳೇ ,... ಮಗನ ಕಣ್ಣೀರಿನೊಂದಿಗೆ ಅವಳೂ  ಕಣ್ಣೀರು ಸುರಿಸಿರಲಾರಳೇ  ಅಥವಾ 'ನೀನು ಅಳಬೇಡ ,ನಿನ್ನೊಂದಿಗೆ ತಾಯಿ ಇಲ್ಲವೇ' ಎಂದು ಸಾಂತ್ವನ ನೀಡಿರಲಾರಳೇ
ಮೊದಲಾದ ಉತ್ತರ ಸಿಗದ ಪ್ರಶ್ನೆಗಳು ಇಂದಿಗೂ ನನ್ನನ್ನು ಕಿತ್ತು ತಿನ್ನುತ್ತಿವೆ. ಆದರೂ ನನಗೆ ಈಗಲೂ ಆ ತಾಯಿಯೊಂದಿಗೆ ಹೇಳಲಿಕ್ಕಿರುವುದು ಒಂದೇ ಮಾತು 'ಅಮ್ಮಾ ಕ್ಷಮಿಸು. ಮಗನನ್ನು ಕಳ್ಳನಾಗಿಸಿದ ಜನರ ಗುಂಪಿನಲ್ಲಿ ನಾನೂ ಇದ್ದೆ. ಅವನ ನಿರಪರಾಧಿತ್ವವನ್ನು ಸಾಬೀತು ಪಡಿಸುವ ಸಂದರ್ಭ ಒದಗಿ ಬಂದರೂ ನಾನು ಮೌನಿಯಾದೆ. ಅಮ್ಮಾ .. ನನ್ನ ಕ್ಷಮಿಸಮ್ಮಾ.... (ಇದು ಸಂಗ್ರಹಿತ ಘಟನೆಯಾದ್ದರಿಂದ ಇಲ್ಲಿ 'ನಾನು' ಎಂಬ ಪದವನ್ನು ಬಳಸಿದ್ದೇನೆ.)